ಬೆಂಗಳೂರು: ಆತಿಥೇಯ ಕರ್ನಾಟಕ ತಂಡದವರು 9ನೇ ಅಖಿಲ ಭಾರತ ಬಿಎಸ್ಎನ್ಎಲ್ ಹಾಕಿ ಟೂರ್ನಿ ‘ಬಿ’ ಗುಂಪಿನ ಲೀಗ್ನಲ್ಲಿ ಸುಲಭ ವಿಜಯ ಸಾಧಿಸಿ ಶುಭಾರಂಭ ಮಾಡಿದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಬಿ’ ಗುಂಪಿನ ಉದ್ಘಾಟನಾ ಲೀಗ್ ಪಂದ್ಯದಲ್ಲಿ ಗೋಲಿನ ಸುರಿಮಳೆಗೆರೆದ ಕರ್ನಾಟಕ ತಂಡ ಪ್ರಬಲ ಮಹಾರಾಷ್ಟ್ರ ವಿರುದ್ಧ 7-0 ಅಂತರದಲ್ಲಿ ಭರ್ಜರಿ ಜಯ ಪಡೆಯಿತು.
ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ಡಾಮ್ನಿಕ್ ಜಾರ್ಜ್ (3), ಎಂ. ರಾಥೋಡ್ (2), ಮಹಮದ್ ಎ. ನಯೀಮ್ ಬೆಪಾರಿ, ಪಾರ್ಥಿಬನ್ ಗೋಲು ತಂದಿತ್ತರು.
ಇದೇ ಟೂರ್ನಿಯ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಚಾಂಪಿಯನ್ ಜಾರ್ಖಂಡ್ 7-0 ಗೋಲುಗಳಿಂದ ಪಶ್ಚಿಮ ಬಂಗಾಳ ಮೇಲೆ ಜಯ ಸಾಧಿಸಿ ಪೂರ್ಣ ಪಾಯಿಂಟ್ಸ್ ಸಂಗ್ರಹಿಸಿತು.
ಇತರ ಲೀಗ್ ಪಂದ್ಯಗಳಲ್ಲಿ ಒರಿಸ್ಸಾ 9-2 ಗೋಲುಗಳಿಂದ ರಾಜಾಸ್ತಾನ ಮೇಲೂ, ಜಮ್ಮು ಮತ್ತು ಕಾಶ್ಮೀರ ತಂಡ 4-2 ಗೋಲುಗಳಿಂದ ಗುಜರಾತ್ ವಿರುದ್ಧವೂ ಗೆದ್ದಿತು. ಮಾಜಿ ಒಲಿಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಎಂ.ಪಿ. ಗಣೇಶ್ ಟೂರ್ನಿಯನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ಬಿಎಸ್ಎನ್ಎಲ್ ಕರ್ನಾಟಕ ವಲಯ ಸಿ.ಜಿ.ಎಂ. ಪಿ. ರಾಘವನ್ ಅಧ್ಯಕ್ಷತೆ ವಹಿಸಿದ್ದರು.