ನವದೆಹಲಿ (ಪಿಟಿಐ): ಕೆರಿಬಿಯನ್ ನಾಡಿನಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಮಾತಿನ ಚಕಮಕಿ ನಡೆಸ್ದ್ದಿದ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜ ಕೊನೆಗೂ ಕ್ಷಮೆಯಾಚಿಸಿದ್ದಾರೆ.
ಇಬ್ಬರೂ ಆಟಗಾರರು ತಂಡದ ಮ್ಯಾನೇಜರ್ ಎಂ.ವಿ.ಶ್ರೀಧರ್ ಅವರೊಂದಿಗೆ ಚರ್ಚಿಸಿದ್ದು, ಕ್ರೀಡಾಂಗಣದಲ್ಲಿನ ನಡವಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
`ತಂಡದ ಮ್ಯಾನೇಜರ್ ಜೊತೆಗೆ ರೈನಾ ಹಾಗೂ ಜಡೇಜ ಮಾತನಾಡಿದ್ದಾರೆ. ಕ್ರೀಡಾಂಗಣದಲ್ಲಿನ ತಮ್ಮ ವರ್ತನೆಗೆ ಉಭಯ ಆಟಗಾರರು ಷರತ್ತುರಹಿತ ಕ್ಷಮೆಯಾಚಿಸಿದ್ದಾರೆ. ಇಂತಹ ಘಟನೆ ಮತ್ತೊಮ್ಮೆ ಪುನರಾವರ್ತನೆಯಾಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ `ಘಟನೆ ಸಂಬಂಧ ವರದಿ ನೀಡುವಂತೆ ತಂಡದ ಮ್ಯಾನೇಜರ್ ಅವರನ್ನು ಕೋರಲಾಗಿದೆ' ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಸೋಮವಾರವಷ್ಟೇ ತಿಳಿಸಿದ್ದರು. ಶುಕ್ರವಾರ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ರೈನಾ ಅವರು ಸುನಿಲ್ ನಾರಾಯಣ್ ಬಾರಿಸಿದ ಚೆಂಡನ್ನು ಎರಡು ಬಾರಿ ಕೈ ಚೆಲ್ಲಿದ್ದರು.