ಚಿಕ್ಕಮಗಳೂರು: ರಾಷ್ಟ್ರಮಟ್ಟದ ಕಾರು ಚಾಲಕ ಬೆಂಗಳೂರಿನ ಎ.ಆರ್.ಶಬ್ಬೀರ್ ಮತ್ತು ಬೈಕ್ ಸವಾರ ಬೆಂಗಳೂರಿನ ಸೈಯದ್ ಅನೀಶ್ ಅಹಮದ್, ವಾಸ ಆಟೊ ಸ್ಪೋರ್ಟ್ಸ್ ಸಂಸ್ಥೆ ವುಡ್ಲ್ಯಾಂಡ್ ಪ್ರಾಯೋಜಕತ್ವದಲ್ಲಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಆಟೋ ಕ್ರಾಸ್ 3ನೇ ಸುತ್ತಿನ ಸ್ಪರ್ಧೆಯಲ್ಲಿ ಕ್ರಮವಾಗಿ ಕಾರು ಮತ್ತು ಬೈಕ್ಗಳ ವಿಭಾಗದಲ್ಲಿ ಚಾಂಪಿಯನ್ಗಳಾಗಿ ಹೊರಹೊಮ್ಮಿದರು.
ಮೌಂಟೆನ್ ವ್ಯೆವ್ ಶಾಲೆ ಎದುರಿನ ಆಮೆನ್ ಸಾಮಿಲ್ ಮೈದಾನದ ಡರ್ಟ್ ಟ್ರ್ಯಾಕ್ನಲ್ಲಿ ಬೆಳಿಗ್ಗೆ ತುಂತುರು ಮಳೆಯಲ್ಲೇ ಸ್ಪರ್ಧೆ ಆರಂಭವಾಯಿತು. 150 ಸಿಸಿ ಯಮಹಾ ಬೈಕನ್ನು ಚಾಕಚಕತ್ಯೆಯಿಂದ ಶರವೇಗದಲ್ಲಿ ಚಾಲನೆ ಮಾಡಿದ ಸೈಯದ್ ಅನೀಶ್ ಅಹಮದ್ ನಿರೀಕ್ಷೆಯಂತೆ ಚಾಂಪಿಯನ್ಷಿಪ್ ಮುಡಿಗೇರಿಸಿಕೊಂಡರು.
23 ಸುತ್ತುಗಳಲ್ಲೂ ಎದುರಾಳಿಗೆ ಅವಕಾಶ ನೀಡದೇ ಮುನ್ನಡೆ ಕಾಯ್ದುಕೊಂಡರು. ಅನೀಶ್ಗೆ ಪ್ರಬಲ ಪೈಪೋಟಿ ನೀಡಿದ ಬೆಂಗಳೂರಿನ ನರೇಶ್ ಮತ್ತು ಚಿಕ್ಕಮಗಳೂರಿನ ಫ್ರಾನ್ಸಿಸ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದ ಬೆಂಗಳೂರಿನ ಮತ್ತೊಬ್ಬ ಸ್ಪರ್ಧಿ ಮೂರ್ತಿ ಅವರ ಯಮಹಾ ಬೈಕ್ ಅರ್ಧದಲ್ಲೇ ಕೆಟ್ಟು ಸ್ಪರ್ಧೆಯಿಂದ ಹೊರ ನಡೆಯುವಂತೆ ಮಾಡಿತು.
ಇದೇ ಟ್ರ್ಯಾಕ್ನಲ್ಲಿ ನಡೆದ ಕಾರುಗಳ ಸ್ಪರ್ಧೆಯಲ್ಲಿ 1600 ಸಿ.ಸಿ. ಸಾಮರ್ಥ್ಯದ ಹೋಂಡಾ ಸಿಟಿ ಚಲಾಯಿಸಿದ ಚಾಲಕ ಎ.ಆರ್.ಶಬ್ಬೀರ್ ಚಾಂಪಿಯನ್ ಆಗಿ ಹೊರಹೊಮ್ಮಿದರು. 23 ಲ್ಯಾಪ್ಗಳಲ್ಲೂ ಮುನ್ನಡೆ ಕಾಯ್ದುಕೊಂಡು, ನೆರೆದಿದ್ದ ಪ್ರೇಕ್ಷಕರ ಮನಗೆದ್ದರು. ಅವರಿಗೆ ಪ್ರಬಲ ಪೈಪೋಟಿ ನೀಡಿದ ಬೆಂಗಳೂರಿನ ಬಿ.ಸಿ.ರೂಪೇಶ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.