ಬೆಂಗಳೂರು: ಟೋಟಲೈಸೇಟರ್ ಬೆಂಗಳೂರು ಟರ್ಫ್ ಕ್ಲಬ್ ರಾಜಿ ತೆರಿಗೆ ಮೊತ್ತವನ್ನು ಬಜೆಟ್ನಲ್ಲಿ ಶೇ. 4 ರಿಂದ ಶೇ. 8ಕ್ಕೆ ಏರಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕ್ರಮ ರೇಸಿಂಗ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಟ್ನಲ್ಲಿ ಜೂಜು ತೆರಿಗೆಯನ್ನು ದುಪ್ಪಟ್ಟು ಹೆಚ್ಚು ಮಾಡಿರುವ ಬಗ್ಗೆ ಬೆಂಗಳೂರು ಟರ್ಫ್ ಕ್ಲಬ್ನ ಮಾಜಿ ಚೇರಮನ್ ಡಾ. ಕೆ.ಎಂ. ಶ್ರೀನಿವಾಸ್ ಗೌಡ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
‘ಕಳೆದ ವರ್ಷದ ಒಟ್ಟು 1200 ಕೋಟಿ ರೂಪಾಯಿ ವ್ಯವಹಾರದಲ್ಲಿ ಶೇ. 10ರಷ್ಟನ್ನು ತೆರಿಗೆ ರೂಪದಲ್ಲಿ ನೀಡಲಾಗಿದೆ. ಅಂದರೆ 120 ಕೋಟಿ ರೂಪಾಯಿಯನ್ನು ತೆರಿಗೆ ನೀಡಲಾಗಿದೆ. ಸರ್ಕಾರಕ್ಕೆ 52 ಕೋಟಿ ರೂಪಾಯಿ ತೋಟಾ ತೆರಿಗೆಯನ್ನು ಸಹ ಭರಿಸಲಾಗುತ್ತದೆ. ಕ್ಲಬ್ನ ಮಾಲೀಕರಿಗೆ, ರೇಸ್ ಟ್ರ್ಯಾಕ್ ನಿರ್ವಹಣೆ, ಸಿಬ್ಬಂದಿ ವೇತನ ಸೇರಿದಂತೆ ಹಲವಾರು ಖರ್ಚುಗಳನ್ನು ಟರ್ಫ್ ಕ್ಲಬ್ ನಿಭಾಯಿಸಬೇಕು. ಇದನ್ನೆಲ್ಲಾ ನಿಭಾಯಿಸಿ ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ.ಅದರಲ್ಲೂ ಈ ಸಲದ ಬಜೆಟ್ನಲ್ಲಿ ಜೂಜು ತೆರಿಗೆಯನ್ನು ಶೇ 4ರಿಂದ ಶೇ 8ಕ್ಕೆ ಹೆಚ್ಚು ಮಾಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ’ ಎಂದು ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ನಿರ್ವಹಣಾ ವೆಚ್ಚದ ಜೊತೆಗೆ ದಾಖಲೆಗಳನ್ನು ನಿಭಾಯಿಸಬೇಕಾದ ವೆಚ್ಚವೂ ಹೆಚ್ಚಾಗುತ್ತಾ ಸಾಗಿದೆ ಎಂದು ಅವರು ತಿಳಿಸಿದ್ದಾರೆ.‘ಬುಕ್ಕಿಗಳಿಗೆ ಶೇ 20ರಷ್ಟು ಹಣ ಕೂಡಾ ನೀಡಬೇಕು. ಬುಕ್ಕಿಗಳು ಸರಿಯಾದ ದಾಖಲೆಗಳನ್ನು ಸಹ ನಿಭಾಯಿಸುವುದಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಇದೆಲ್ಲದರ ಪರಿಣಾಮವಾಗಿ ಟರ್ಫ್ ಕ್ಲಬ್ ಸಂಕಷ್ಟಕ್ಕೆ ಒಳಗಾಗಬೇಕಾದ ಸ್ಥಿತಿ ತಲೆದೋರಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
‘ತೆರಿಗೆ ಹೆಚ್ಚಳ ಮಾಡಿರುವ ಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪುನರ್ ಪರಿಶೀಲಿಸಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಶ್ರೀನಿವಾಸನ್ ಮನವಿ ಮಾಡಿದ್ದಾರೆ.