ಗದಗ: ‘ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ತಾಂತ್ರಿಕ ಆವಿಷ್ಕಾರಗಳನ್ನು ಸಂಶೋಧಿಸಬೇಕು’ ಎಂದು ನವೋದ್ಯಮ ಒವೈಇ ಮನಿ ಡಾಟ್ ಕಾಂನ ಸಂಸ್ಥಾಪಕ ಡಾ. ಶಿವೇಂದ್ರ ಭಾಟಿಯಾ ಹೇಳಿದರು.
ಇಲ್ಲಿನ ಹುಲಕೋಟಿ ರೂರಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ `ಆರ್ಇಸಿ-ಉತ್ಸವ'ದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗಷ್ಟೇ ಅಧ್ಯಯನ ಮಾಡದೇ, ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಬೇಕು.ಕೇವಲ ಅಂಕಗಳಿಂದ ಜೀವನದ ಕನಸುಗಳು ಸಾಕಾರಗೊಳ್ಳುವುದಿಲ್ಲ’ ಎಂದು ಅವರು ತಿಳಿಸಿದರು.
‘ವಿದ್ಯಾರ್ಥಿಗಳು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು. ಲಭಿಸುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಶ್ರದ್ಧೆ, ಪ್ರಾಮಾಣಿಕತೆಯಿಂದ ಪ್ರಯತ್ನಿಸಿದಾಗ ಯಶಸ್ಸು ಪ್ರಾಪ್ತಿಯಾಗುತ್ತದೆ’ ಎಂದು ಹುಬ್ಬಳ್ಳಿಯ ಕೆಎಲ್ಇ ಎಸ್ಸಿಐ ಮುನವಳ್ಳಿ ಪಾಲಿಟೆಕ್ನಿಕ್ನ ಪ್ರಾಚಾರ್ಯ ವೀರೇಶ ಅಂಗಡಿ ಅಭಿಪ್ರಾಯಪಟ್ಟರು.
‘ವಿದ್ಯಾರ್ಥಿಗಳು ಪಠ್ಯ ಕಲಿಕೆ ಜತೆಗೆ ಸಂಶೋಧನೆ, ಆವಿಷ್ಕಾರಗಳಿಗೆ ಮಹತ್ವ ನೀಡಬೇಕು’ ಎಂದು ಪ್ರಾಚಾರ್ಯ ಡಾ. ವಿ.ಎಂ. ಪಾಟೀಲ ಹೇಳಿದರು.ಉಪನ್ಯಾಸಕರಾದ ಶಿವಾನಂದ ಪ್ರಭುಸ್ವಾಮಿಮಠ, ಎಸ್.ಆರ್. ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಪ್ರಬಂಧ ಮಂಡನೆ: ರಾಷ್ಟ್ರಮಟ್ಟದ ವಿಚಾರಗೋಷ್ಠಿ `ಶೋಧ-2019' ಕಾರ್ಯಕ್ರಮದ ಅಂಗವಾಗಿ 20ಕ್ಕೂ ಹೆಚ್ಚು ಅಂತರ್ ಕಾಲೇಜು ವಿದ್ಯಾರ್ಥಿಗಳು 100ಕ್ಕೂ ಹೆಚ್ಚು ಪ್ರಬಂಧ ಮಂಡಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿದ ವಿದ್ಯುತ್ ಚಾಲಿತ ವಾಹನಗಳ ಮಾದರಿಯನ್ನು ಪ್ರದರ್ಶಿಸುವ ‘ರೋಬೋ ಪ್ಯಾಂಥರ್’ ಸ್ಪರ್ಧೆಯಲ್ಲಿ ವಿವಿಧ ಎಂಜಿನಿಯರಿಂಗ್ ಕಾಲೇಜ್ಗಳಿಂದ 10ಕ್ಕೂ ಹೆಚ್ಚು ಮಾದರಿಗಳು ಪ್ರದರ್ಶನಗೊಂಡವು.