ಬೆಂಗಳೂರು: ಪ್ರವಾಹ ಪೀಡಿತ ಗ್ರಾಮಗಳ ಪುನರ್ ನಿರ್ಮಾಣಕ್ಕೆ ₹10 ಕೋಟಿಗೂ ಹೆಚ್ಚು ದೇಣಿಗೆ ನೀಡುವ ಉದ್ಯಮಗಳ ಹೆಸರನ್ನೇ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿ, ಪ್ರವಾಹದಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇವರ ನೆರವಿಗೆ ಕೈಗಾರಿಕೋದ್ಯಮಿಗಳು ಮುಂದಾಗಬೇಕು. ಉದಾತ್ತವಾಗಿ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು.
ಕ್ರೆಡಾಯ್ ₹3 ಕೋಟಿ, ಟೊಯೋಟಾ ₹ 2 ಕೋಟಿ, ಟಿ.ವಿ.ಎಸ್. ಮೋಟಾರು ಸಂಸ್ಥೆ ₹1 ಕೋಟಿ ಹಾಗೂ ಲೋಗೋಸ್ಗ್ರೂಪ್ ₹ 25 ಲಕ್ಷ ದೇಣಿಗೆ ನೀಡುವುದಾಗಿ ಸಭೆಯಲ್ಲಿ ಪ್ರಕಟಿಸಿದವು.
ಆಗಸ್ಟ್ 14 ರಂದು 67 ಚೆಕ್ಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲುಪಿದ್ದು, ಇವುಗಳ ಮೊತ್ತ ₹38 ಲಕ್ಷದಷ್ಟಿದೆ. ದಾನಿಗಳು ಡಿ.ಡಿ ಹಾಗೂ ಆನ್ಲೈನ್ ಮೂಲ ನೀಡಿದ ಮೊತ್ತವೂ ಸೇರಿ ಗುರುವಾರ ಒಂದೇ ದಿನ ₹1.39 ಕೋಟಿ ಸ್ವೀಕೃತಿಯಾಗಿದೆ. ಆ.9ರಿಂದ ಒಟ್ಟು ₹4.09 ಕೋಟಿ ಪರಿಹಾರ ನಿಧಿಗೆ ಸಂದಾಯವಾಗಿದೆ.