ಬೆಂಗಳೂರು:‘ಸುಳ್ವಾಡಿ ಮಾರಮ್ಮ ದೇವಿಯ ಪ್ರಸಾದಕ್ಕೆ ವಿಷ ಬೆರೆಸಿದವರನ್ನು ಹಾಗೂ ದೇವಸ್ಥಾನದ ಹೆಸರಿನಲ್ಲಿ ಅವ್ಯವಹಾರ ನಡೆಸಿದ ಮಹದೇವ ಸ್ವಾಮಿಯನ್ನು ದೇವರೂ ಕ್ಷಮಿಸುವುದಿಲ್ಲ’ ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ಹೇಳಿದರು.
ದಿವ್ಯಜ್ಯೋತಿ ಜ್ಯೋತಿಷ ಶಾಸ್ತ್ರ ಕಾಲೇಜು ಭಾನುವಾರ ಆಯೋಜಿಸಿದ್ದ ಮೂರು ದಿನಗಳ 12ನೇ ಅಂತರರಾಷ್ಟ್ರೀಯ ಜ್ಯೋತಿಷ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ತಪ್ಪು ಯಾರೇ ಮಾಡಲಿ ಅವರಿಗೆ ಶಿಕ್ಷೆ ಖಚಿತ. ಜನರಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತುವ ಕೆಲಸ ಮಾಡಬೇಕು. ತಪ್ಪು ಸಂದೇಶಗಳನ್ನು ಸಾರುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಅಸ್ಟ್ರಾಲಾಜಿಕಲ್ ಸರ್ವಿಸಸ್ ಹಬ್ ಅಧ್ಯಕ್ಷ ಎಚ್.ಚಂದ್ರಶೇಖರ್, ‘ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಜ್ಯೋತಿಷ ಶಾಸ್ತ್ರ ಅಧ್ಯಯನ ಕೇಂದ್ರಕ್ಕೆ ಕಟ್ಟಡದ ಕೊರತೆಯಿದೆ. ನಿವೇಶನ ನೀಡುವಂತೆ ಹಿಂದಿನ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಗಲಿಲ್ಲ. ನಿವೇಶನ ಮಂಜೂರು ಮಾಡುವಂತೆ ಈಗಿನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದರು.
ಕರ್ನಾಟಕ ರಾಜ್ಯ ಜ್ಯೋತಿಷ ಸಂಸ್ಥೆಗಳ ಒಕ್ಕೂಟದ ಸಹ ಕಾರ್ಯದರ್ಶಿ ಟಿ.ಆರ್.ವಿಜಯಕುಮಾರ್, 'ನೃತ್ಯ, ನಾಟಕ, ಕಲೆ, ಸಂಗೀತ ಕ್ಷೇತ್ರಗಳಿಗೆ ಮನ್ನಣೆ ನೀಡಿದಂತೆ ಜ್ಯೋತಿಷ ಶಾಸ್ತ್ರ ಕ್ಷೇತ್ರದ ಅಭಿವೃದ್ಧಿಗೂ ಪ್ರೋತ್ಸಾಹ ನೀಡಬೇಕು’ ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ‘ಜ್ಯೋತಿಷಿ ಸಂಘ ಸಂಸ್ಥೆಗಳು ಸಲ್ಲಿಸಿದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜ್ಯೋತಿಷಶಾಸ್ತ್ರ ‘ಸ್ಮರಣ ಸಂಚಿಕೆ’, ಜ್ಯೋತಿರ್ವಿಜ್ಞಾನದ ‘ಮಿನಿ ಪಂಚಾಂಗ’, ಜ್ಯೋತಿಷಕ್ಕೆ ಸಂಬಂಧಿಸಿದ ‘ಆಯ-ಪಾಯ-ಅಪಾಯ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ರಾಜ್ಯ ಜ್ಯೋತಿಷ ಸಂಸ್ಥೆಗಳ ಬೇಡಿಕೆಗಳು
* ಜ್ಯೋತಿರ್ವಿಜ್ಞಾನ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು
* ರಾಜ್ಯ ಜ್ಯೋತಿಷ ಪರಿಷತ್ತು ಸ್ಥಾಪಿಸಬೇಕು
* ಜ್ಯೋತಿಷ ಶಾಸ್ತ್ರದವರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು