ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ಗುರುವಾರ ‘ವಿಶ್ವ ನೃತ್ಯ ದಿನಾಚರಣೆ’ಯನ್ನು ಆಚರಿಸಲಾಯಿತು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘ವಿಭಾಗದ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಕೊಟ್ಟು ಪ್ರತಿಭಾವಂತರನ್ನು ಸೃಷ್ಟಿಸುತ್ತಿದ್ದಾರೆ. ಅದು ಹಾಗೆ ಮುಂದುವರಿಯಲಿ’ ಎಂದು ಹಾರೈಸಿದರು.
ಕುಲಸಚಿವ ಬಿ.ಕೆ.ರವಿ, ‘ನಮ್ಮಲ್ಲಿ ಅಪಾರವಾದ ಜನಪದ ಕಲಾ ಸಂಪತ್ತಿದೆ. ಅನೇಕರು ಶಾಸ್ತ್ರೀಯ ನೃತ್ಯಗಳ ಮೂಲ ಸೊಗಡನ್ನು ಬಿಟ್ಟು ಪಾಶ್ಚಾತ್ಯದ ಪ್ರಭಾವಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಶಾಸ್ತ್ರೀಯ ನೃತ್ಯ ಮೂಲ ಬೇರನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ’ ಎಂದು ಹೇಳಿದರು.
ಅಭಿನವ ನೃತ್ಯ ಸಂಸ್ಥೆಯ ನಿರ್ದೇಶಕಿ ಮತ್ತು ಕಥಕ್ ನೃತ್ಯ ಖ್ಯಾತಿಯ ನಿರುಪಮಾ ರಾಜೇಂದ್ರ, ನಿವೃತ್ತ ಪ್ರಾಧ್ಯಾಪಕರಾದ ಆರ್.ಟಿ.ರಮಾ, ಉಷಾ ದಾತಾರ್, ಸುಧೀಂದ್ರಶರ್ಮಾ, ವಿಜಯಾ ಮಾರ್ತಾಂಡ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಯಕ್ಷಗಾನ, ಕಥಕ್ ನೃತ್ಯವನ್ನು ಪ್ರದರ್ಶಿಸಿದರು. ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಎನ್.ಸುಶೀಲಾ ಇದ್ದರು.