ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಪ್ರಮಾಣ ಗಣನೀಯ ಇಳಿಕೆ: ಕಮಿಷನರ್

ಮನೆ ಮನೆಗೆ ಜಾಗೃತಿ ಕರಪತ್ರ ವಿತರಣೆ: ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜನೆ
Last Updated 10 ಡಿಸೆಂಬರ್ 2018, 14:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಸಕ್ತ ಸಾಲಿನಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ 2,047, 2017ರಲ್ಲಿ 1,814 ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ವರ್ಷ ಪ್ರಸಕ್ತ ಸಾಲಿನ ನವೆಂಬರ್ ವರೆಗೆ 1,300 ಪ್ರಕರಣಗಳು ದಾಖಲಾಗಿವೆ. ಈ ವರ್ಷದಲ್ಲಿ ಕಳವಾದ ಸ್ವತ್ತುಗಳ ಒಟ್ಟು ಮೊತ್ತ ₹3 ಕೋಟಿಯಾಗಿದ್ದು ಅದರಲ್ಲಿ ₹1 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪ‍ಡಿಸಿಕೊಳ್ಳಲಾಗಿದೆ. 2017ರಲ್ಲಿ ಕಳವಾಗಿದ್ದ ₹5.83 ಕೋಟಿ ಸ್ವತ್ತಿನಲ್ಲಿ ₹2 ಕೋಟಿ ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.

ಹೊಸ ಗಸ್ತು ವ್ಯವಸ್ಥೆ ಜಾರಿಗೆ ಬಂದ ಮೇಲೆ ಅಪರಾಧಗಳ ಪ್ರಮಾಣ ಕಡಿಮೆಯಾಗಿದೆ. ಹಲವು ಪ್ರಕರಣಗಳನ್ನು ಭೇದಿಸಲು ಮಾಹಿತಿಯೂ ಸಿಕ್ಕಿದೆ. ಈ ಬಾರಿ ಅಪರಾಧ ತಡೆ ಮಾಸಾಚರಣೆಯನ್ನು ವಿನೂತನವಾಗಿ ಆಚರಿಸಲಾಗುವುದು. ಇನ್‌ಸ್ಪೆಕ್ಟರ್ ಸೇರಿದಂತೆ ಎಲ್ಲ ಅಧಿಕಾರಿಗಳು ಕನಿಷ್ಠ ಮೂರು ಕಾಲೇಜುಗಳಿಗೆ ಭೇಟಿ ನೀಡಿ ಅಪರಾಧ ತಡೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಾದಕ ವಸ್ತು, ಸೈಬರ್ ಅಪರಾಧ, ಆನ್‌ಲೈನ್ ವಂಚನೆ ಬಗ್ಗೆ ತಿಳಿವಳಿಕೆ ನೀಡುವರು ಎಂದರು.

ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಜನರಿಗೆ ಮಾಹಿತಿ ನೀಡಲು ಈ ಬಾರಿಯೂ ಮನೆ ಮನೆಗೆ ಕರಪತ್ರ ಹಂಚಲಾಗುವುದು. ಇದಕ್ಕಾಗಿ ಒಟ್ಟು 5 ಲಕ್ಷ ಕರಪತ್ರ ಮುದ್ರಿಸಲಾಗಿದೆ. ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು. ಡಿಸಿಪಿ ರವೀಂದ್ರ ಗಡಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT