ಬೆಂಗಳೂರು: 'ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದಲ್ಲಿ ಎಲ್ಲ ಅಡೆತಡೆಗಳು ಕಣ್ಮರೆಯಾಗುತ್ತವೆ. ಬುದ್ಧಿವಂತಿಕೆಯು ಜ್ಞಾನದ ಪ್ರತೀಕವಾಗಿ ಪ್ರಜ್ವಲಿಸುತ್ತದೆ' ಎಂದು ಸಹಜ ಸ್ಮೃತಿ ಯೋಗದ ಪ್ರತಿಪಾದಕ ಗುರೂಜಿ ನಂದಕಿಶೋರ್ ತಿವಾರಿ ತಿಳಿಸಿದರು.
ದರ್ಪಣ ಫೌಂಡೇಷನ್ ಗುರು ಪೂರ್ಣಿಮೆ ಅಂಗವಾಗಿ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಸ್ಟಡೀಸ್ನ ಸ್ಥಾಪಕ ಮತ್ತು ವೈದಿಕ ವಿದ್ವಾಂಸ ಡೇವಿಡ್ ಫ್ರಾಲೀ ಅವರೊಂದಿಗೆ ಭಾನುವಾರ ಏರ್ಪಡಿಸಿದ್ದ ಫೇಸ್ಬುಕ್ ನೇರಪ್ರಸಾರದ ಚರ್ಚೆಯಲ್ಲಿ ಅವರು ಮಾತನಾಡಿದರು.
'ಪ್ರಸ್ತುತ ನಾವು ಸಾಂಕ್ರಾಮಿಕ, ಮಾನವ ನಡವಳಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ಸ್ಥಿತಿಯಲ್ಲಿ ಸರಿಯಾದ ಶಿಕ್ಷಣ ಅಗತ್ಯ. ಇದರಿಂದ ಭವಿಷ್ಯದ ಪೀಳಿಗೆಯು ಮುಕ್ತ, ಸಂತೋಷ ಹಾಗೂ ಶಾಂತಿಯುತವಾಗಿ ಇರಲಿದೆ' ಎಂದರು.
ಶಿಕ್ಷಣದ ಮಹತ್ವದ ಬಗ್ಗೆ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ ಡೇವಿಡ್ ಫ್ರ್ಯಾಲೀ, 'ಹೊರಗಿನ ನೋಟ ನೋಡುತ್ತಾ ನಾವು ಆಂತರಿಕ ವಾಸ್ತವವನ್ನೇ ನಿರ್ಲಕ್ಷಿಸಿದ್ದೇವೆ. ಪ್ರಶ್ನೆಗಳನ್ನು ಕೇಳಲು, ಆಂತರಿಕ ವಾಸ್ತವಕ್ಕೆ ತೆರಳಲು ಮಕ್ಕಳನ್ನುಪ್ರೋತ್ಸಾಹಿಸಬೇಕು' ಎಂದು ಕಿವಿಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.