ಬೆಂಗಳೂರು: ‘ನಿಮ್ಮ ಭಗವದ್ಗೀತೆ ಹಾಗೂ ರಾಮಾಯಣ ಸಾಕು, ಸುಮ್ಮನೇ ಚುನಾವಣೆ ನಡೆಸಿ’ ಎಂದು ರಾಜ್ಯ ಒಕ್ಕಲಿಗರ ಸಂಘಕ್ಕೆ ಹೈಕೋರ್ಟ್ ಮೌಖಿಕವಾಗಿ ತಾಕೀತು ಮಾಡಿದೆ.
ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ಆರು ಮಂದಿ ನಿರ್ದೇಶಕರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ, ‘ಈ ಕುರಿತಂತೆ ಸಂಘದ ನಿರ್ದೇಶಕರು ಐದು ನಿಮಿಷದಲ್ಲಿ ತಮ್ಮ ಅಭಿಪ್ರಾಯ ನೀಡಬೇಕು’ ಎಂದು ಸೂಚಿಸಿತು.
ಇದಕ್ಕೆ ಸಂಘದ ಪರ ಹಾಜರಿದ್ದ ವಕೀಲ ಶ್ರೀಕಾಂತ ಪಾರ್ಥಸಾರಥಿ, ‘ನಾಳೆಯವರೆಗೆ (ಡಿ.21) ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಒಂದು ವೇಳೆ ಅಭಿಪ್ರಾಯ ತಿಳಿಸದೇ ಹೋದರೆ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಲಾಗುವುದು’ ಎಂದಿದೆ.