ಬೆಂಗಳೂರು: ಪ್ರಕರಣವೊಂದರ ವಿಚಾರಣೆಗಾಗಿ ಮಹಿಳೆಯೊಬ್ಬರನ್ನು ಹುಳಿಮಾವು ಠಾಣೆಗೆ ಕರೆತಂದಿದ್ದ ವೇಳೆ ಹೈಡ್ರಾಮಾ ನಡೆದಿದ್ದು, ಯುವತಿಯೊಬ್ಬಳು ಬಟ್ಟೆ ಹರಿದುಕೊಂಡು ಪೊಲೀಸರಿಗೇ ಜೀವ ಬೆದರಿಕೆ ಹಾಕಿದ್ದಾಳೆ.
ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಕಳ್ಳತನ ಪ್ರಕರಣದ ವಿಚಾರಣೆಗಾಗಿ ಗೀತಾ ಎಂಬುವರನ್ನು ಠಾಣೆಗೆ ಕರೆತರಲಾಗಿತ್ತು. ಅದಾಗಿ ಕೆಲ ನಿಮಿಷಗಳ ಬಳಿಕ ಠಾಣೆಗೆ ಬಂದಿದ್ದ ಯುವತಿಯೊಬ್ಬಳು, ‘ಗೀತಾ ಅವರನ್ನು ಏಕೆ ಕರೆದುಕೊಂಡು ಬಂದಿದ್ದಿರಾ’ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿ ಜಗಳ ತೆಗೆದಿದ್ದಳು’ ಎಂದು ಪೊಲೀಸರು ಹೇಳಿದರು.
‘ಯುವತಿಯ ವರ್ತನೆಯನ್ನು ಮಹಿಳಾ ಕಾನ್ಸ್ಟೆಬಲ್ ಶಕುಂತಲಾ ಪ್ರಶ್ನಿಸಿದ್ದರು. ಆರೋಪಿಗಳು, ಅವರನ್ನು ಠಾಣೆಯಲ್ಲೇ ತಳ್ಳಿ ಹಲ್ಲೆ ಮಾಡಲು ಪ್ರಯತ್ನಿಸಿದ್ದರು. ರಕ್ಷಣೆಗೆ ಹೋದ ಇತರೆ ಸಿಬ್ಬಂದಿ ಮೇಲೂ ಹಲ್ಲೆಗೆ ಯತ್ನಿಸಿದ್ದರು’ ಎಂದು ಮಾಹಿತಿ ನೀಡಿದರು.
‘ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಯುವತಿಯೇ ತನ್ನ ಬಟ್ಟೆ ಹರಿದುಕೊಂಡು, ‘ನಿಮಗೆಲ್ಲ ಏನು ಮಾಡುತ್ತೇನೆ ನೋಡಿ’ ಎಂದು ಬೆದರಿಕೆ ಹಾಕಿ ಕೂಗಾಡುತ್ತ ಠಾಣೆಯಿಂದ ಓಡಿ ಹೋಗಿದ್ದಾಳೆ. ಮಹಿಳಾ ಕಾನ್ಸ್ಟೆಬಲ್ ನೀಡಿರುವ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.