ಹುಬ್ಬಳ್ಳಿ: ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾಹಿತಿ ಮತ್ತು ಶ್ವೇತಾಂಬರ ಜೈನ ಸಮಾಜ ಬಾಂಧವರಿಗೆ ಅಲ್ಪ ಸಂಖ್ಯಾತ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು.
ಆಲ್ ಇಂಡಿಯಾ ಜೈನ ಯೂತ್ ಫೆಡರೇಷನ್ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಸಚಿವ ಆರ್.ವಿ. ದೇಶಪಾಂಡೆ ಉದ್ಘಾಟಿಸಿದರು. ಒಂದೇ ದಿನ 400 ಪ್ರಮಾಣ ಪತ್ರವನ್ನು ವಿತರಿಸಿದ್ದು ಸಂತಸ ತಂದಿದೆ ಎಂದರು.
ಬರ ಪೀಡಿತರು, ಅಶಕ್ತರು ಹಾಗೂ ಅಂಗವಿಕಲರಿಗೆ, ಗೋಶಾಲೆಗಳಿಗೆ ಜೈನ ಸಮಾಜದವರು ನೆರವು ನೀಡುವ ಮೂಲಕ ಆದರ್ಶಪ್ರಾಯರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖಂಡ ಮಹೇಂದ್ರ ಸಿಂಘಿ ಮಾತನಾಡಿ, ಮನಮೋಹನ್ ಸಿಂಗ್ ಅವರ ಸರ್ಕಾರ ಶ್ವೇತಾಂಬರ ಜೈನ ಪಂಗಡದವರಿಗೆ ಅಲ್ಪ ಸಂಖ್ಯಾತರ ಪ್ರಮಾಣ ಪತ್ರವನ್ನು ನೀಡುವ ಘೋಷಣೆ ಮಾಡಿತ್ತು. ಆದರೆ ತಹಶೀಲ್ದಾರರು ಅದನ್ನು ಪರಿಗಣಿಸದ ಕಾರಣ ಪ್ರಮಾಣ ಪತ್ರ ವಿತರಣೆ ವಿಳಂಬವಾಯಿತು. ಇದರಿಂದಾಗಿ ಸಮಾಜದವರು ಸೌಲಭ್ಯಗಳಿಂದ ವಂಚಿತರಾದರು ಎಂದರು.
ಶ್ವೇತಾಂಬರ ಜೈನ ಸಮಾಜದವರಿಗೆ ಅಲ್ಪಸಂಖ್ಯಾತರ ಪ್ರಮಾಣ ಪತ್ರವನ್ನು ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಅವರು ಮನವಿ ಮಾಡಿದರು.
ಜೈನ ಮರುಧರ ಸಂಘದ ಟ್ರಸ್ಟಿ ದಿನೇಶ ಸಂಘವಿ, ಶ್ರೀ ವರ್ಧಮಾನ ಜೈನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಕಾರ್ಯಾಧ್ಯಕ್ಷ ಅಶೋಕ ಕೋಠಾರಿ, ತೇರಾಪಂಥ ಸಭೆಯ ಅಧ್ಯಕ್ಷ ಮಹೇಂದ್ರ ಪಾಲಗೋತಾ, ಮಹಾವೀರ ಯೂಥ್ ಫೆಡರೇಷನ್ನ ಸುರೇಶ ಚಾಜ್ಜೇಡ, ಭಾರತೀಯ ಜೈನ ಸಂಘಟನೆ ಅಧ್ಯಕ್ಷ ವಿನೋದ ತಾತೇಡ, ಸಂತೋಷ ಡುಮಾವತ ಉಪಸ್ಥಿತರಿದ್ದರು.