ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಜಿ.ರಸ್ತೆ– ಟ್ರಿನಿಟಿ ನಡುವೆ ಚಲಿಸುವುದಿಲ್ಲ ಮೆಟ್ರೊ

ಶುಕ್ರವಾರ ರಾತ್ರಿಯಿಂದ ಭಾನುವಾರ ರಾತ್ರಿವರೆಗೆ ಸಂಚಾರ ವ್ಯತ್ಯಯ
Last Updated 27 ಡಿಸೆಂಬರ್ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ಟ್ರಿನಿಟಿ ನಿಲ್ದಾಣದ ಬಳಿ ಮೆಟ್ರೊ ಹಳಿಯನ್ನು ದುರಸ್ತಿ ಪಡಿಸಬೇಕಿರುವುದರಿಂದ ಇದೇ 28ರ (ಶುಕ್ರವಾರ) ರಾತ್ರಿ 8 ಗಂಟೆಯಿಂದ ಇದೇ 30ರ ರಾತ್ರಿವರೆಗೆ ಎಂ.ಜಿ.ರಸ್ತೆ ನಿಲ್ದಾಣದಿಂದ ಇಂದಿರಾನಗರ ನಿಲ್ದಾಣದವರೆಗೆ ‘ನಮ್ಮ ಮೆಟ್ರೊ’ ಸಂಚಾರ ಇರುವುದಿಲ್ಲ.

ಟ್ರಿನಿಟಿ ನಿಲ್ದಾಣದ ಬಳಿ ಪಿಲ್ಲರ್ ಸಂಖ್ಯೆ 155ರ ವಯಡಕ್ಟ್‌ ಬಳಿ ಕಾಂಕ್ರೀಟ್‌ ರಚನೆಯಲ್ಲಿ ಇದೇ 13ರಂದು ದೋಷ (ಹನಿಕೋಂಬ್‌ ರಚನೆ) ಕಾಣಿಸಿಕೊಂಡಿತ್ತು. ಇದರಿಂದಾಗಿ ಇಲ್ಲಿನ ಹಳಿಯ ಮೇಲೂ ಒತ್ತಡ ಉಂಟಾಗಿತ್ತು. ಇಲ್ಲಿನ ಕಾಂಕ್ರೀಟ್‌ ರಚನೆಯ ದುರಸ್ತಿ ಕಾರ್ಯ ಈಗಾಗಲೇ ನಡೆಯುತ್ತಿದೆ. ಇಲ್ಲಿನ ಹಳಿಯನ್ನೂ ದುರಸ್ತಿ ಪಡಿಸುವ ಸಲುವಾಗಿ ಈ ಮಾರ್ಗದಲ್ಲಿ ಮೆಟ್ರೊ ಸಂಚಾರ ಸ್ಥಗಿತಗೊಳಿಸಲೇ ಬೇಕಾದ ಅನಿವಾರ್ಯ ಎದುರಾಗಿದೆ.

‘ಶುಕ್ರವಾರ ರಾತ್ರಿ (ಇದೇ 28) 8 ಗಂಟೆಯಿಂದ ಭಾನುವಾರ ರಾತ್ರಿವರೆಗೆ ಎಂ.ಜಿ.ರಸ್ತೆ– ಇಂದಿರಾನಗರ ನಿಲ್ದಾಣಗಳ ನಡುವಿನ ಮೆಟ್ರೊ ಸಂಚಾರವನ್ನು ಸಂಪೂರ್ಣ ರದ್ದುಪಡಿಸಲಾಗಿದೆ. ಇದೇ 31ರಂದು (ಭಾನುವಾರ) ಬೆಳಿಗ್ಗೆ 5ರಿಂದ ಸೇವೆ ಈ ಮಾರ್ಗದಲ್ಲಿ ಮೆಟ್ರೊ ಸೇವೆ ಪುನರಾರಂಭಗೊಳ್ಳಲಿದೆ’ ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ತಿಳಿಸಿದರು.

‘ಈ ದಿನಗಳಲ್ಲಿ ಮೈಸೂರು ರಸ್ತೆಯಿಂದ ಎಂ.ಜಿ.ರಸ್ತೆವರೆಗೆ ಹಾಗೂ ಬೈಯಪ್ಪನಹಳ್ಳಿಯಿಂದ ಇಂದಿರಾನಗರದ ನಡುವೆ ಮೆಟ್ರೊ ಸಂಚಾರ ಎಂದಿನಂತೆಯೇ ಮುಂದುವರಿಯಲಿದೆ’ ಎಂದು ಅವರು ತಿಳಿಸಿದರು.

‘ಮೈಸೂರು ರಸ್ತೆಯಿಂದ ಶುಕ್ರವಾರ ರಾತ್ರಿ 7.30ಕ್ಕೆ ಮುಂಚಿತವಾಗಿ ಹೊರಡುವ ರೈಲುಗಳು ಬೈಯಪ್ಪನಹಳ್ಳಿವರೆಗೆ ಸಂಚರಿಸಲಿವೆ. ಬೈಯಪ್ಪನಹಳ್ಳಿಯಿಂದ ರಾತ್ರಿ 7.45ಕ್ಕೆ ಮುಂಚೆ ಹೊರಡುವ ರೈಲುಗಳು ಮೈಸೂರು ರಸ್ತೆವರೆಗೆ ಸಂಚರಿಸಲಿವೆ. ಹಸಿರು ಮಾರ್ಗದ ನಿಲ್ದಾಣಗಳಲ್ಲಿ ಬೈಯಪ್ಪನಹಳ್ಳಿ ವರೆಗೆ ಸಂಚರಿಸಲು ಟಿಕೆಟ್‌ ಖರೀದಿಸುವ ಪ್ರಯಾಣಿಕರಿಗೆ ಸಂಜೆ 6.45ರ ನಂತೆ ಟಿಕೆಟ್‌ ನೀಡುವುದಿಲ್ಲ’ ಎಂದು ಅವರು ತಿಳಿಸಿದರು.

ಉಚಿತ ಬಸ್‌: ಎಂ.ಜಿ.ರಸ್ತೆ– ಇಂದಿರಾನಗರ ನಡುವೆ ಮೆಟ್ರೊ ಸಂಚಾರ ಸ್ಥಗಿತಗೊಳ್ಳುವ ಅವಧಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಬ್ಬನ್‌ಪಾರ್ಕ್‌ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ (ಎರಡೂ ದಿಕ್ಕುಗಳಲ್ಲಿ) ಉಚಿತ ಬಸ್‌ ಪ್ರಯಾಣದ ಸೌಕರ್ಯ ಕಲ್ಪಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT