ಬೆಂಗಳೂರು: 'ಗೋವುಗಳ ಬಗ್ಗೆ ನಿಜವಾದ ಪ್ರೀತಿ ಇದ್ದರೆ ಗೋ ಮಾಂಸ ರಫ್ತು ನಿಲ್ಲಿಸಲಿ. ಗೋ ಹತ್ಯೆ ತಡೆಯಲಿ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಸವಾಲು ಹಾಕಿದರು.
ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, 'ಮೋದಿ ಅವರದ್ದು ನಕಲಿ ಹಿಂದುತ್ವ. ಆರ್ಎಸ್ಎಸ್ ರಾಷ್ಟ್ರೀಯ ಸೇವಾ ಸಂಸ್ಥೆಯಲ್ಲ, ಅದು ರಿಲಯನ್ಸ್ ಸೇವಾ ಸಂಸ್ಥೆ' ಎಂದು ಗಂಭೀರ ಆರೋಪ ಮಾಡಿದರು.
‘ಸೈನಿಕರ ಕಾರ್ಯವನ್ನು ಬಿಜೆಪಿ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಸೇನಾ ದಾಳಿಗಳನ್ನು ಪಕ್ಷ ಎಂದೂ ಪ್ರಚಾರಕ್ಕೆ ಬಳಸಿಕೊಂಡಿಲ್ಲ’ ಎಂದರು.
'ಮೋದಿ ಸ್ವಯಂ ಘೋಷಿತ ಚೌಕಿದಾರ್. ಎಲ್ಲರೂ ಕೊಳ್ಳೆ ಹೊಡೆದು ಹೋದ ಬಳಿಕ ತಮ್ಮನ್ನು ಅವರು ಚೌಕಿದಾರ್ ಎಂದು ಹೇಳಿಕೊಳ್ಳತ್ತಿದ್ದಾರೆ. ನೀರವ್ ಮೋದಿ, ಮಲ್ಯ ಲೂಟಿ ಮಾಡಿ ಹೋಗುವಾಗ ಮೋದಿ ಎಲ್ಲಿ ಕಾವಲು ಕಾಯುತ್ತಿದ್ದರು' ಎಂದು ರೆಡ್ಡಿ ಲೇವಡಿ ಮಾಡಿದರು.
‘ಮಾನ್ಯತಾ ಟೆಕ್ ಪಾರ್ಕ್ ಘಟನೆಯ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ. ಟೆಕಿಗಳ ವೇಷದಲ್ಲಿ ಬಿಜೆಪಿ ಕಾರ್ಯಕರ್ತರು ಬಂದು ಮೋದಿಪರ ಘೋಷಣೆ ಕೂಗಿದ್ದಾರೆ. ಬಿಜೆಪಿಯ ಕುತಂತ್ರ ಇದು’ ಎಂದು ವಾಗ್ದಾಳಿ ನಡೆಸಿದರು.
'ಮೇಯರ್ ಆಗಬೇಕೆಂಬ ಆಸೆ ಇತ್ತು. ಮೊದಲ ಬಾರಿ ಪಾಲಿಕೆ ಸದಸ್ಯ ಆದಾಗಲೇ ವಿಧಾನಸಭೆ ಸದಸ್ಯನಾಗುವ ಅವಕಾಶ ಸಿಕ್ಕಿತ್ತು. ಸಚಿವನಾಗಬೇಕು ಅಂದುಕೊಂಡಿದ್ದೆ. ಅದೂ ಆದೆ. ಆದರೆ, ಲೋಕಸಭೆಗೆ ಹೋಗಬೇಕು ಎಂದು ಅಂದುಕೊಂಡಿಲ್ಲ. ನನ್ನ ಮಗಳು ಸೌಮ್ಯಾ ಮೊದಲ ಬಾರಿ ಶಾಸಕಿ ಆಗಿದ್ದಾರೆ’ ಎಂದರು.
'ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಗೋವಿಂದರಾಜು, ಎಂ. ಕೃಷ್ಣಪ್ಪ ಸೇರಿದಂತೆ 3–4 ಮಂದಿ ಅಭ್ಯರ್ಥಿಗಳಿದ್ದಾರೆ. ಹೀಗಾಗಿ, ಈ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಳಿಲ್ಲ ಎನ್ನುವುದು ತಪ್ಪು’ ಎಂದೂ ಅವರು ಸಮರ್ಥನೆ ನೀಡಿದರು.