ಬೆಂಗಳೂರು: ‘ಸಾಲ ತೀರಿಸಿದ್ದರೂ ಬ್ಯಾಂಕ್ ನಮಗೆ ಇನ್ನೂ ಋಣಮುಕ್ತ ಪತ್ರ ನೀಡಿಲ್ಲ’ ಎಂಬ ಆಕ್ಷೇಪಣೆಯನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ (ಯುಎಸ್ಎಲ್) ಹೈಕೋರ್ಟ್ಗೆ ತಿಳಿಸಿದೆ.
ಈ ಕುರಿತಂತೆ ಐಡಿಬಿಐ ಮತ್ತು ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಇನ್ವೆಸ್ಟ್ಮೆಂಟ್ ಕಂಪನಿ ವಿರುದ್ದ ಯುಎಸ್ಎಲ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಯುಎಸ್ಎಲ್ ಕಂಪನಿ ಪರ ಹಾಜರಿದ್ದ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪಿ.ಚಿದಂಬರಂ, ‘ಕಂಪನಿಯು ₹ 625 ಕೋಟಿ ಬ್ಯಾಂಕ್ ಸಾಲವನ್ನು ಈಗಾಗಲೇ ಹಿಂದಿರುಗಿಸಿದೆ. ಆದಾಗ್ಯೂ, ಬ್ಯಾಂಕ್ ನಮಗಿನ್ನೂ ಋಣಮುಕ್ತ ಪತ್ರ ನೀಡುತ್ತಿಲ್ಲ’ ಎಂದು ಆಕ್ಷೇಪಿಸಿದರು.
ಸುದೀರ್ಘ ವಾದ ಮಂಡಿಸಿದ ಅವರು, ‘ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್ಫಿಷರ್ ವಾಯುಯಾನ ಕಂಪನಿ ಪಡೆದಿರುವ ಸಾಲಕ್ಕೆ ನಾವು ಹೊಣೆಗಾರರಲ್ಲ’ ಎಂದು ವಿವರಿಸಿದರು.
ಬ್ಯಾಂಕ್ ಆಕ್ಷೇಪ: ‘ಸಾಲ ನೀಡುವಾಗ ಮಲ್ಯ ಯುಎಸ್ಎಲ್ ಕಂಪನಿ ಅಧ್ಯಕ್ಷರಾಗಿದ್ದರು. ಈ ಕಾರಣಕ್ಕಾಗಿಯೇ ಸಾಲ ನೀಡಲಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಅಂದು ಕಂಪನಿಯು ಬ್ರಾಂಡ್ ವ್ಯಾಲ್ಯೂ ನೋಡಿಯೇ ಸಾಲ ನೀಡಲಾಗಿತ್ತು. ಈಗ ಅವರು ಆ ಸ್ಥಾನದಲ್ಲಿ ಇಲ್ಲ ಎಂದಾಕ್ಷಣ ಅಂದಿನ ಪ್ರಕರಣದಿಂದ ಬಚಾವಾಗಲು ಸಾಧ್ಯವಿಲ್ಲ’ ಎಂಬುದು ಬ್ಯಾಂಕ್ ಪರ ವಕೀಲರ ವಾದವಾಗಿದೆ.
ಐಡಿಬಿಐ ಕೆಲವು ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದ ಕಾರಣ ನ್ಯಾಯಪೀಠವು, ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿದೆ.