ಬೆಂಗಳೂರು: ‘ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ದಂಪತಿ ಬಗೆಗಿನ ವಿವರಗಳನ್ನು ಕೇಂದ್ರ ಗೃಹ ಇಲಾಖೆಯಿಂದ ಪಡೆದು ಕೋರ್ಟ್ಗೆ ಸಲ್ಲಿಸಲಾಗುವುದು’ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಪಾಕಿಸ್ತಾನದ ಕರಾಚಿ ಜಿಲ್ಲೆಯ ಚಕ್ರಫೋಟ್ ಜಿಲ್ಲೆಯ ಕಾಸೀಫ್ ಶಂಸುದ್ಧೀನ್ ಮತ್ತು ಪತ್ನಿ ಕಿರಾಣ್ ಗುಲಾಮ್ ಅಲಿ ಅವರು, ‘ನಮ್ಮ ಜೈಲು ಶಿಕ್ಷೆ ಅವಧಿ ಕಡಿತಗೊಳಿಸಬೇಕು’ ಎಂದು ಕೋರಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರವಾರ ವಿಚಾರಣೆ ನಡೆಸಿತು.
ವಿಚಾರಣೆ ನ್ಯಾಯಮೂರ್ತಿಗಳು. ‘ಅರ್ಜಿದಾರರನ್ನು ವೃಥಾ ಇಲ್ಲಿ ಜೈಲಿನಲ್ಲಿ ಇರಿಸಿಕೊಂಡು ಏಕೆ ಸತ್ಕಾರ ಮಾಡುತ್ತಿದ್ದೀರಿ. ಅವರನ್ನೇಕೆ ಅವರ ಸ್ವದೇಶಕ್ಕೆ ಕಳುಹಿಸಬಾರದು’ ಎಂದು ಪುನರುಚ್ಚರಿಸಿದರು.
ಇದಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಅವರು, ‘ಈ ಕುರಿತಂತೆ ಗೃಹ ಇಲಾಖೆಯಿಂದ ವಿವರ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.