ಬೆಂಗಳೂರು: ಶಿವಾಜಿನಗರದಲ್ಲಿರುವ ‘ಐ.ಎಂ.ಎ ಗೋಲ್ಡ್’ ಕಂಪನಿ ವಿರುದ್ಧ ಸುದ್ದಿ ಪ್ರಕಟಿಸುವುದಾಗಿ ಬ್ಲ್ಯಾಕ್ಮೇಲ್ ಮಾಡಿ ₹ 2 ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪದಡಿ ‘ಪವರ್ ಟಿ.ವಿ’ ಸುದ್ದಿವಾಹಿನಿ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.
‘ಕಂಪನಿಯ ಬಗ್ಗೆ ಪವರ್ ಟಿ.ವಿ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡುವುದಾಗಿ ಹೆದರಿಸಿ, ಒಳಸಂಚು ನಡೆಸಿ, ಹಣ ಕೊಡುವಂತೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ’ ಎಂದು ಆರೋಪಿಸಿ ಕಂಪನಿಯ ಕಾರ್ಯಾಚರಣೆ ಮುಖ್ಯಸ್ಥ ಎ.ನಿಜಾಮುದ್ದೀನ್ ಅವರು ಫೆಬ್ರುವರಿ 14ರಂದು ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ, ಸಹಾಯಕ ವ್ಯವಸ್ಥಾಪಕ ವಿನೋದ್ ಕುಮಾರ್, ವರದಿಗಾರ ಚಂದ್ರಶೇಖರ್ ಹಾಗೂ ಮುಖ್ಯಸ್ಥ ಚಂದನ್ ಶರ್ಮಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
‘ಪ್ರಕರಣದ ಕಡತಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ. ಅವರಿಗೆ ನೋಟಿಸ್ ನೀಡಿ ವಿಚಾರಣೆ ಮಾಡಬೇಕಿದೆ’ ಎಂದು ಸಿಸಿಬಿಯ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ದೂರಿನ ವಿವರ: ‘ಐ.ಎಂ.ಎ ಗೋಲ್ಡ್ ಕಂಪನಿಯ ಚಿನ್ನಾಭರಣಗಳನ್ನು ಪ್ರಸಿದ್ಧಗೊಳಿಸಲು 2018ರ ನವೆಂಬರ್ 1ರಿಂದ ಪವರ್ ಟಿ.ವಿ ಸುದ್ದಿವಾಹಿನಿಯಲ್ಲಿ ಜಾಹೀರಾತು ನೀಡಲಾಗಿತ್ತು. ಕೆಲ ದಿನಗಳ ನಂತರ ಆರೋಪಿಗಳು, ಜಾಹೀರಾತು ಪ್ರಸಾರಕ್ಕೆ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಲು ಆರಂಭಿಸಿದ್ದರು. ಅದಕ್ಕೆ ಒಪ್ಪದಿದ್ದಾಗ ಬ್ಲ್ಯಾಕ್ಮೇಲ್ ಮಾಡಲಾರಂಭಿಸಿದ್ದರು’ ಎಂದುನಿಜಾಮುದ್ದೀನ್ ದೂರಿನಲ್ಲಿ ತಿಳಿಸಿದ್ದಾರೆ.
‘ಒಳ ಸಂಚು ನಡೆಸಿ ದಾಖಲಾತಿಗಳನ್ನು ಸಂಗ್ರಹಿಸಿದ್ದ ಆರೋಪಿಗಳು, ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡುವು ದಾಗಿ ಬೆದರಿಸಿದ್ದರು. ₹1 ಕೋಟಿ–₹2 ಕೋಟಿ ಕೊಟ್ಟರೆ ಸುದ್ದಿ ಪ್ರಸಾರ ಮಾಡುವುದಿಲ್ಲವೆಂದು ಹೇಳಿದ್ದರು. ವಾಹಿನಿಯ ಕಚೇರಿಗೆ ಬಂದು ಸಂಪರ್ಕಿಸುವಂತೆ ಫೆ. 13ರಂದುಆರೋಪಿಗಳು ವಾಟ್ಸ್ಆ್ಯಪ್ನಲ್ಲಿ ಸಂದೇಶ ಕಳುಹಿಸಿದ್ದರು. ಅದೇ ದಿನ ರಾತ್ರಿ ಕಚೇರಿ ಯಲ್ಲಿ ಕೆಲವರನ್ನು ಕೂರಿಸಿ ಕಂಪನಿ ವಿರುದ್ಧ ಚರ್ಚೆ ಮಾಡುವಂತೆ ಮಾಡಿದ್ದರು. ಆ ಮೂಲಕ ಕಂಪನಿ ಬಗ್ಗೆ ಅಪಪ್ರಚಾರ ಮಾಡಿದ್ದರು’ ಎಂದು ತಿಳಿಸಿದ್ದಾರೆ.
ಬ್ಲ್ಯಾಕ್ಮೇಲ್ ಮಾಡಿದ್ದರೆದೂರು ನೀಡಿ
‘ಸುದ್ದಿ ಪ್ರಕಟಿಸುವುದಾಗಿ ಹೇಳಿಸುದ್ದಿ ವಾಹಿನಿಗಳು ಹಾಗೂ ಪತ್ರಿಕೆಗಳ ಹೆಸರಿನಲ್ಲಿ ಯಾರಾದರೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದು ದೂರು ನೀಡಿ’ ಎಂದು ಅಲೋಕ್ಕುಮಾರ್ ಹೇಳಿದರು.