ಕಲಬುರ್ಗಿ:ಅಫಜಲಪುರ ತಾಲ್ಲೂಕಿನ ಅರ್ಜುಣಗಿ ಗ್ರಾಮದ ಶ್ರೀಗುರು ಹಾನಗಲ್ಲ ಕುಮಾರೇಶ್ವರ ವಿರಕ್ತಮಠ ಪೀಠಾಧಿಪತಿ ಜಡೆಯ ಶಾಂತಲಿಂಗೇಶ್ವರ ಸ್ವಾಮಿಗಳ 11ನೇಯ ಸ್ಮರಣೋತ್ಸವ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು.
ತೇರಿನ ಮಠ ಬಡದಾಳದ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ‘ಮಾನವೀಯತೆ ಇಲ್ಲದ ಮನುಷ್ಯ ಸಮಾಜಕ್ಕೆ ಹೊರೆ. ಆದರೆ, ಸಮಾಜದಲ್ಲಿ ಒಳ್ಳೆಯ ಕೆಲಸಮಾಡುತ್ತ ನಡೆದಾಗ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯ’ ಎಂದರು.
‘ಪೂಜ್ಯರ ಸಂಕಲ್ಪದಂತೆ ನಾವು, ನೀವೆಲ್ಲರೂ ಅವರ ಆದೇಶ ಪಾಲಿಸಬೇಕು. ಪೂಜ್ಯರಲ್ಲಿ ಅಪಾರ ಶಕ್ತಿಯಿದೆ. ಇಂದಿನ ದಿನಮಾನಗಳಲ್ಲಿ ಗುರು, ಹಿರಿಯರನ್ನು ತಂದೆ ತಾಯಂದಿರನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳಬೇಕು‘ ಎಂದು ತಿಳಿಸಿದರು.
ಮಠದ ಭೈರಾಮಡಗಿ ಪೂಜ್ಯರು,ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಗ್ರಾಣ ವ್ಯವಸ್ಥಾಪಕ ಚಂದ್ರಕಾಂತ್ ಎಸ್. ಬೆಣ್ಣಿಶಿರೂರ, ವಿದ್ಯಾಧರ ಪಾಟೀಲ, ದಯಾನಂದ ಪನಶೆಟ್ಟಿ, ಶರಣಬಸಪ್ಪ ಎಸ್.ಕೆ. ಕಲಬುರಗಿ, ಸುರೇಶ ಎಸ್. ಮಾಲಿಪಾಟೀಲ, ಅಂಬಾರಾಯ ಎಂ. ಕೋಣೆ, ನರಸಣ್ಣ ಸಿ. ಮೇತ್ರೆ ವೇದಿಕೆ ಮೇಲಿದ್ದರು.
ಕಾರ್ಯಕ್ರಮದ ಅಂಗವಾಗಿ ಸೋಮಯ್ಯ ಹೀರೆಮಠ, ಷಣ್ಮುಖಯ್ಯ ಹೀರೆಮಠ ಅವರಿಂದ ಸಂಗೀತ ಸೇವೆ ನಡೆಯಿತು. ಭೀಮರಾಯ ಎಸ್.ಎಚ್. ಕಾರ್ಯಕ್ರಮ ನಿರೂಪಿಸಿದರು.