ಬೆಂಗಳೂರು: ತನ್ನ ವಿರುದ್ಧ ಸಾಕ್ಷಿ ಹೇಳಿದ್ದವರಿಗೆ ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದ ಕುಖ್ಯಾತ ರೌಡಿ ಭರತ ಅಲಿಯಾಸ್ ಸ್ಲಂ ಭರತನನ್ನು ಸಿಸಿಬಿ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಲೋಕೇಶ್ ಅಲಿಯಾಸ್ ಮುಲಾಮನ ಸಹಚರನಾದ ಸ್ಲಂ ಭರತನ ವಿರುದ್ಧ 4 ಕೊಲೆ, 7 ಕೊಲೆ ಯತ್ನ, 5 ಅಪಹರಣ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 28 ಪ್ರಕರಣಗಳು ದಾಖಲಾಗಿವೆ. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಈತ, ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಡಕಾಯಿತಿಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಈತನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆ ಪ್ರಕರಣದ ಸಾಕ್ಷಿದಾರರಿಗೆ ಇತ್ತೀಚೆಗೆ ಕರೆ ಮಾಡಿದ್ದ ಭರತ, ‘ನನ್ನ ವಿರುದ್ಧ ಹೇಳಿಕೆ ನೀಡಿದರೆ ಕೊಲೆ ಮಾಡುತ್ತೇನೆ’ ಎಂದು ಬೆದರಿಸಿದ್ದ. ಈ ವಿಚಾರವನ್ನು ಸಿಸಿಬಿ ಪೊಲೀಸರ ಗಮನಕ್ಕೆ ತಂದಿದ್ದ ಅವರು, ರಕ್ಷಣೆಯನ್ನೂ ಕೋರಿದ್ದರು. ಇಷ್ಟಾದರೂ ಆರೋಪಿ ಆ ಸಾಕ್ಷಿದಾರನಿಗೆ ಹಲ್ಲೆ ನಡೆಸಿದ್ದ.
ಮಂಗಳವಾರ ಸಂಜೆ ಭರತ ಕೆಂಗೇರಿ ಸಮೀಪದ ಕೊಮ್ಮಘಟ್ಟಕ್ಕೆ ಬಂದಿರುವ ಮಾಹಿತಿ ಪಡೆದ ಪಿಎಸ್ಐ ಪ್ರವೀಣ್ ನೇತೃತ್ವದ ತಂಡ, ಮಫ್ತಿಯಲ್ಲಿ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಕಾನ್ಸ್ಟೆಬಲ್ ಹನುಮೇಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ, ಬಳಿಕ ಪಿಎಸ್ಐ ಮೇಲೂ ದಾಳಿಗೆ ಮುಂದಾದ. ಈ ಹಂತದಲ್ಲಿ ಆತ್ಮರಕ್ಷಣೆಗಾಗಿ ಅವರು ಕಾಲಿಗೆ ಗುಂಡು ಹೊಡೆದರು ಎಂದು ಪೊಲೀಸರು ಹೇಳಿದ್ದಾರೆ.