ಬೆಂಗಳೂರು: 2015ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯ ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ) ಪ್ರಕ್ರಿಯೆ ಆರಂಭಿಸುವಂತೆ ಆಗ್ರಹಿಸಿ ಕೆಪಿಎಸ್ಸಿ ಕಚೇರಿ ಎದುರು ಶಾಸಕ ಎಸ್. ಸುರೇಶ್ಕುಮಾರ್ ನೇತೃತ್ವದಲ್ಲಿ ಅಭ್ಯರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಕೆಪಿಎಸ್ಸಿ ವಿರುದ್ಧ ಘೋಷಣೆ ಕೂಗಿದ ಅಭ್ಯರ್ಥಿಗಳು, ಕೂಡಲೇ ಸಂದರ್ಶನದ ದಿನಾಂಕ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
2015ನೇ ಸಾಲಿನ ನೇಮಕಾತಿಗಾಗಿ 2017ರ ಮೇ 12ರಂದು ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿತ್ತು.
ಅದೇ ವರ್ಷ ಆಗಸ್ಟ್ 18ರಂದು ಪೂರ್ವಭಾವಿ ಪರೀಕ್ಷೆ, ಡಿ. 22ರಂದು ಮುಖ್ಯ ಪರೀಕ್ಷೆ ನಡೆಸಿದೆ. 2019ರ ಜ. 28ರಂದು ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಆದರೆ, ನಂತರದ ಪ್ರಕ್ರಿಯೆ ನಡೆದಿಲ್ಲ ಎಂದು ಸುರೇಶ್ಕುಮಾರ್ ಹೇಳಿದರು.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಅಲ್ಲಿನ ಅಧಿಕಾರಿಗಳ ನಡುವೆ ಸಮನ್ವಯ ಇಲ್ಲದಿರುವುದು ಈ ವಿಳಂಬಕ್ಕೆ ಕಾರಣವಾಗಿದೆ. ಇಬ್ಬರ ನಡುವಿನ ಜಟಾಪಟಿಯಲ್ಲಿ ಅಭ್ಯರ್ಥಿಗಳು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರಿದರು.
ಕೆಪಿಎಸ್ಸಿ ಕಾರ್ಯದರ್ಶಿಯೇ ಸ್ಥಳಕ್ಕೆ ಬಂದು ಸಂದರ್ಶದ ವೇಳಾಪಟ್ಟಿ ಪ್ರಕಟಿಸಬೇಕು. ಅಲ್ಲಿಯವರೆಗೂ ಸ್ಥಳದಲ್ಲೇ ಕೂರುವುದಾಗಿ ಹೇಳಿದರು.