ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಕೆ.ಪಿ. ರಮೇಶ್ ಎಂಬುವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಸುಲಿಗೆ ಮಾಡಲಾಗಿದ್ದು, ಆ ಸಂಬಂಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಬಿಎಚ್ಸಿಎಸ್ ಲೇಔಟ್ ನಿವಾಸಿ ಆದ ರಮೇಶ್, ಜೂನ್ 6ರಂದು ರಾತ್ರಿ ಮನೆಗೆ ಹೋಗಲು ಬನಶಂಕರಿಯ 2ನೇ ಹಂತದ ನಿಲ್ದಾಣದ ಬಳಿ ಬಂದಿದ್ದರು. ವಾಹನಕ್ಕಾಗಿ ಕಾಯುತ್ತ ನಿಂತಿದ್ದರು. ಕಾರಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು, ಡ್ರಾಪ್ ನೀಡುವ ನೆಪದಲ್ಲಿ ಹತ್ತಿಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.
‘ಶೆಟ್ಟಿ ಗಾರ್ಡೇನಿಯಾ ಹೋಟೆಲ್ ಬಳಿ ಕಾರು ನಿಲ್ಲಿಸಿದ್ದ ದುಷ್ಕರ್ಮಿಗಳು, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದರು. ರಮೇಶ್ ಬಳಿ ಇದ್ದ ಮೊಬೈಲ್, ಮನೆಯ ಕೀ ಹಾಗೂ ₹ 1,300 ನಗದು ಸುಲಿಗೆ ಮಾಡಿದ್ದಾರೆ. ಕತ್ರಿಗುಪ್ಪೆ ಬಳಿ ರಮೇಶ್ ಅವರನ್ನು ತಳ್ಳಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ’ ಎಂದು ತಿಳಿಸಿದರು.