ದಾಬಸ್ ಪೇಟೆ: ‘ಕ್ಷಯ ವಾಸಿಯಾಗಬಲ್ಲ ಕಾಯಿಲೆಯಾಗಿದ್ದು, ಅದರ ಬಗ್ಗೆ ಕೀಳರಿಮೆ ಬೇಡ. ಅದರ ನಿರ್ಮೂಲನೆಗಾಗಿ ಸರ್ಕಾರ ಉಚಿತ ಚಿಕಿತ್ಸೆಯನ್ನು ಒದಗಿಸುತ್ತಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಾಲ್ಲೂಕು ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಟಿ.ಜಿ. ಜಗದೀಶ್ ಹೇಳಿದರು.
ದಾಬಸ್ ಪೇಟೆ ಬಳಿಯ ಎಡೇಹಳ್ಳಿಯಲ್ಲಿ ಏರ್ಪಡಿಸಿದ್ದ ಕ್ಷಯರೋಗ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಕ್ಷಯ ಸಾಂಕ್ರಾಮಿಕ ರೋಗವಾಗಿದೆಯೇ ಹೊರತು, ವಂಶವಾಹಿ ಕಾಯಿಲೆಯಲ್ಲ. ವರ್ಷಕ್ಕೆ 15ರಿಂದ 20ಜನ ಆರೋಗ್ಯವಂತರಿಗೆ ಬಹುಬೇಗ ಹರಡುವುದರಿಂದ, ರೋಗ ಬಾರದಂತೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದರು.
‘ಶಿವಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 2,255 ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವ ಗುರಿ ಹೊಂದಲಾಗಿದೆ. ಯಾರಿಗಾದರೂ ಕ್ಷಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಅಂಥವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಲಾಗುವುದು’ ಎಂದು ತಿಳಿಸಿದರು.
ಶಿವಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ನಿರೀಕ್ಷಕ ಮಧು ಸೂದನ್ ಮಾತನಾಡಿದರು. ಆರೋಗ್ಯ ಸಹಾಯಕರು, ಗ್ರಾಮಸ್ಥರು ಉಪಸ್ಥಿತರಿದ್ದರು.