ಕೋಲ್ಕತ್ತ: ಇಲ್ಲಿನ ದುರ್ಗಾ ಪೂಜಾ ಆಯೋಜಕರ ವೇದಿಕೆಯು ನವರಾತ್ರಿ ಹಬ್ಬದ ವೇಳೆ ಪಾಲಿಸಬೇಕಾದ ಕೆಲ ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಿದೆ.
‘ಈ ಶಿಫಾರಸುಗಳ ಪಟ್ಟಿಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಲ್ಲಿಸಲಿದ್ದೇವೆ’ ಎಂದು ದುರ್ಗೊತ್ಸವ್ ವೇದಿಕೆಯ ಪದಾಧಿಕಾರಿಯೊಬ್ಬರು ಭಾನುವಾರ ತಿಳಿಸಿದರು. ಈ ವೇದಿಕೆಯು ನಗರದ 350 ದುರ್ಗಾ ಪೂಜಾ ಸಮಿತಿಗಳನ್ನು ಪ್ರತಿನಿಧಿಸುತ್ತಿದೆ.
ಉತ್ಸವಕ್ಕೆ ಬರುವ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸುವುದು, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವುದು, ಏಕಕಾಲದಲ್ಲಿ 25 ಮಂದಿಗೆ ಮಾತ್ರ ಪ್ರವೇಶ ನೀಡುವುದು, ಪೂಜಾ ಅಂಗಣವನ್ನು ಸ್ಯಾನಿಟೈಸ್ ಮಾಡುವುದು ಮೊದಲಾದ ಸುರಕ್ಷತಾ ಕ್ರಮಗಳನ್ನು ವೇದಿಕೆ ಶಿಫಾರಸು ಮಾಡಿದೆ.
ನೂಕುನುಗ್ಗಲು ಆಗದಂತೆ, ಪೂಜಾ ಸ್ಥಳದ ಬಳಿ ಪ್ರವೇಶಿಸದೆ ಮುಖ್ಯದ್ವಾರದಿಂದಲೇ ದರ್ಶನ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸುವ ವ್ಯವಸ್ಥೆ ಮಾಡುವುದು ಸಹ ಈ ಪಟ್ಟಿಯಲ್ಲಿದೆ’ ಎಂದು ಅವರು ಹೇಳಿದರು.
‘ಏನೇನು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂಬ ಶಿಫಾರಸುಗಳ ಪಟ್ಟಿಯನ್ನು ವೇದಿಕೆಯ ಸದಸ್ಯರಿಗೆ ಈಗಾಗಲೇ ವಿತರಿಸಲಾಗಿದೆ. ಇದೇ ಪಟ್ಟಿಯನ್ನು ಮುಖ್ಯಮಂತ್ರಿ ಕಚೇರಿಗೂ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.