ನವದೆಹಲಿ: ‘ಗುಜರಾತ್ ಸರ್ಕಾರದಲ್ಲಿದ್ದ ಯಾವ ವ್ಯಕ್ತಿ ಸಂದೇಸರ ಗ್ರೂಪ್ಗೆ ನೆರವಾದರು ಎಂಬ ನನ್ನ ಒಂದೇ ಒಂದು ಪ್ರಶ್ನೆಗೆ ಉತ್ತರಿಸಲು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ವಿಫಲರಾದರು’ ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ತಿಳಿಸಿದ್ದಾರೆ.
ಹಣದ ಅಕ್ರಮ ವರ್ಗಾವಣೆ ಆರೋಪ ಕುರಿತ ಸಂದೇಸರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಚೆಗೆ ಅಹ್ಮದ್ ಪಟೇಲ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
‘ನನಗೆ 128 ಪ್ರಶ್ನೆಗಳನ್ನು ಕೇಳಲಾಯಿತು. ಎಲ್ಲದಕ್ಕೂ ಉತ್ತರಿಸಿದ್ದೇನೆ. ತನಿಖೆ ನಡೆಸಲು ನನ್ನ ಮನೆಗೇ ಮೂರು ಬಾರಿ ಬಂದಿದ್ದಕ್ಕಾಗಿ ಅಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದೇನೆ’ ಎಂದು ಪಟೇಲ್ ಹೇಳಿದರು.
ಆದರೆ, ‘ಅಧಿಕಾರಿಗಳಿಗೆ ನನ್ನ ಮೂಲಭೂತವಾದ ಒಂದೇ ಒಂದು ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಸಂದೇಸರ ಗ್ರೂಪ್ಗೆ ಹಲವಾರು ರೀತಿಯಲ್ಲಿ ಅನುಕೂಲ ಆಗುವಂತೆ ನೆರವಾದ ಗುಜರಾತ್ ಸರ್ಕಾರದಲ್ಲಿರುವ ವ್ಯಕ್ತಿ ಯಾರು ಎಂಬುದೇ ನನ್ನ ಪ್ರಶ್ನೆಯಾಗಿತ್ತು’ ಎಂದು ಅವರು ಟ್ವೀಟ್ ಮಾಡಿದ್ದಾರೆ.