ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ರೌಡಿಶೀಟರ್ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ರೌಡಿಶೀಟರ್ ಮೃತಪಟ್ಟಿದ್ದು, ಸಬ್ ಇನ್ಸ್ಪೆಕ್ಟರ್ ಒಬ್ಬರು ಗಾಯಗೊಂಡಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
‘ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ದೀಪಕ್ ಸಿದ್ದು ಮೃತಪಟ್ಟವನು. ಈತನ ಬಗ್ಗೆ ಸುಳಿವು ಕೊಟ್ಟವರಿಗೆ ₹ 50 ಸಾವಿರ ಬಹುಮಾನವನ್ನೂ ಘೋಷಿಸಲಾಗಿತ್ತು’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಾಹ್ನಿ ತಿಳಿಸಿದ್ದಾರೆ.
ದೀಪಕ್ ಸಿದ್ದು ವಿರುದ್ಧ ಕೊಲೆ, ಲೂಟಿ ಮತ್ತು ದೌರ್ಜನ್ಯ ಸೇರಿದಂತೆ ಒಂದೂವರೆ ಡಜನ್ಗಿಂತಲೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದವು.
‘ಸಹಚರರೊಂದಿಗೆ ತಾನಿದ್ದಸ್ಥಳಕ್ಕೆ ಬಂದ ಪೊಲೀಸರಮೇಲೆ ಸಿದ್ದು ಗುಂಡಿನ ದಾಳಿ ನಡೆಸಿದ. ಆಗ ಸಬ್ ಇನ್ಸ್ಪೆಕ್ಟರ್ ಒಬ್ಬರು ಗಾಯಗೊಂಡರು. ಪೊಲೀಸರೂ ಪ್ರತಿ ದಾಳಿ ನಡೆಸಿದರು. ಗಾಯಗೊಂಡ ದೀಪಕ್ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆತ ಮೃತಪಟ್ಟ' ಎಂದು ಪೊಲೀಸರು ತಿಳಿಸಿದರು.