ನವದೆಹಲಿ: 'ಪೂರ್ವ ಲಡಾಖ್ನಲ್ಲಿ ಚೀನಾ ತೆಗೆದಿರುವ ತಗಾದೆ ಕೇವಲ ಗಡಿ ವಿವಾದವಷ್ಟೇ ಅಲ್ಲ,`56 ಇಂಚಿನ ಶಕ್ತಿವಂತನ' ವರ್ಚಸ್ಸಿನ ಮೇಲೆ ದಾಳಿಗೆ ರೂಪಿಸಿರುವ ತಂತ್ರ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, `ರಾಹುಲ್ಗಾಂಧಿ ಅವರು ಮತ್ತೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ತಮ್ಮನ್ನು ತಾವು ಬಿಂಬಿಸಿಕೊಳ್ಳುವರದಲ್ಲಿ ಅವರು ಮತ್ತೆ ವಿಫಲರಾಗಿದ್ದಾರೆ' ಎಂದು ಟೀಕಿಸಿದ್ದಾರೆ.
ಇಂಥ ಹೇಳಿಕೆಗಳ ಮೂಲಕ ರಾಹುಲ್ಗಾಂಧಿ ಅವರು ಭಾರತವನ್ನು ದುರ್ಬಲಗೊಳಿಸುವ ಮತ್ತು ಚೀನಾವನ್ನು ಸದೃಢಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೂ ಮೊದಲು ರಾಹುಲ್ಗಾಂಧಿ, ಚೀನಾದವರು ಪ್ರಧಾನಿ ತಾವು ಬಯಸಿದಂತೆ ಕ್ರಮಕೈಗೊಳ್ಳಲು ಪ್ರೇರೇಪಿಸುತ್ತಿದ್ದಾರೆ. ಅಥವಾ ಅವರ ಶಕ್ತಿವಂತ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿರಬಹುದು. ಗಡಿ ತಗಾದೆಯ ಮೂಲಕ ಚೀನಾ ಪ್ರಧಾನಿ ವರ್ಚಸ್ಸಿನ ಮೇಲೇ ದಾಳಿ ನಡೆಸುತ್ತಿದೆ ಎಂದು ವ್ಯಾಖ್ಯಾನಿಸಿದರು.
ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಜೆ.ಪಿ.ನಡ್ಡಾ ಅವರು, ಇದು ರಾಹುಲ್ಗಾಂಧಿ ಅವರನ್ನು ಬಿಂಬಿಸುವ ಕಾರ್ಯದ ಇನ್ನೊಂದು ಆವೃತ್ತಿ. ಎಂದಿನಂತೆ ಅವರಿಗೆ ವಾಸ್ತವಗಳ ಅರಿವಿಲ್ಲ. ಈ ಮೂಲಕ ತಮ್ಮ ಪಕ್ಷವನ್ನೇ ಇನ್ನಷ್ಟು ನಾಶಗೊಳಿಸುತ್ತಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ, ದೋಖ್ಲಾಮ್ನಿಂದ ಇಲ್ಲಿಯವರೆಗೂ ರಾಹುಲ್ಗಾಂಧಿ ಅವರು ಚೀನೀಯರ ಪರವಾಗಿ ವಾದ ಮಂಡಿಸುತ್ತಿದ್ದಾರೆ. ಅವರಿಗೆ ಭಾರತೀಯ ಸೇನೆಯ ಮೇಲೆ ನಂಬಿಕೆ ಇಲ್ಲವೇ? ಭಾರತವನ್ನು ದುರ್ಬಲಗೊಳಿಸುವ ಉದ್ದೇಶವೇನು ಎಂದು ನಡ್ಡಾ ಪ್ರಶ್ನಿಸಿದರು.