ಮುಂಬೈ: ‘ವಿರೋಧ ಪಕ್ಷಗಳಿಗೆ ತಾಕತ್ತಿದ್ದರೆ ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಲಿ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಪಕ್ಷದ ಮುಖವಾಣಿ ‘ಸಾಮ್ನಾ’ಕ್ಕೆ ನೀಡಿರ ಸಂದರ್ಶನದಲ್ಲಿ ಅವರು ವಿರೋಧ ಪಕ್ಷಗಳಿಗೆ ಈ ಸವಾಲು ಹಾಕಿದ್ದಾರೆ.
ಜುಲೈ 27ರಂದು 60ನೇ ವರ್ಷ ಪದಾರ್ಪಣೆ ಮಾಡಲಿರುವ ಉದ್ಧವ್ ಠಾಕ್ರೆ ಅವರು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಸಂಜಯ್ ರಾವುತ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಅವರು ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.
ಈ ಸಂದರ್ಶನವು ಎರಡು ಪತ್ರಿಕೆಯಲ್ಲಿ ಪ್ರಕಟವಾಗುವ ಜೊತೆಗೆ ಜುಲೈ 25 ಹಾಗೂ 26ರಂದು ವೆಬ್ಕಾಸ್ಟ್ ಮೂಲಕ ಪ್ರಸಾರವೂ ಆಗಲಿದೆ.
‘ನಾನು ಈಗ ಮುಖ್ಯಮಂತ್ರಿಯಾಗಿರಬಹುದು. ಆದರೆ, ದಿನ ಬೆಳಗಾಗುವುದರಲ್ಲಿ ನನಗೆ 60 ವರ್ಷ ತುಂಬಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆಡಳಿತದಲ್ಲಿ ಸವಾಲುಗಳನ್ನು ಎದುರಿಸುತ್ತಿರುವುದಾಗಿ ಸೂಚ್ಯವಾಗಿ ಹೇಳಿದರು.
ರಾಜ್ಯ ಸರ್ಕಾರ ಮೂರು ಗಾಲಿಗಳ ಮೇಲೆ ಓಡುತ್ತಿದೆ ಎಂಬ ಬಿಜೆಪಿ ಟೀಕೆ ಕುರಿತ ಪ್ರಶ್ನೆಗೆ, ‘ಹಾಗಾದರೆ, ಕೇಂದ್ರ ಸರ್ಕಾರ ಎಷ್ಟು ಗಾಲಿಗಳ ಮೇಲೆ ಓಡುತ್ತಿದೆ’ ಎಂದು ಮರು ಪ್ರಶ್ನೆ ಎಸೆದರು.
‘ಕೋವಿಡ್–19 ನಿಂದಾಗಿ ನಾವು ಸಂಕಷ್ಟದ ಸಮಯ ಎದುರಿಸುತ್ತಿದ್ದೇವೆ. ಇದಕ್ಕಾಗಿ ಎಲ್ಲರೂ ಕಟ್ಟುನಿಟ್ಟಾಗಿ ಮಾರ್ಗಸೂಚಿ ಅನುಸರಿಸಬೇಕು. ಈ ಸಂಕಷ್ಟವನ್ನು ಜಯಿಸುತ್ತೇವೆ. ನಾನು ನಿರಾಶಾವಾದಿಯಲ್ಲ. ಇತರರೂ ಆಗಲು ಬಿಡಲುವುದಿಲ್ಲ’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.