ನವದೆಹಲಿ:ದೆಹಲಿಯಲ್ಲಿ ನಾಗರಿಕ ಸೇವೆಗಳ ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿಮಾನ ಪ್ರಯಾಣ ದರವನ್ನು ಮರುಪಾವತಿಸಲು ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್ಸಿ) ನಿರ್ಧರಿಸಿದೆ.
ಆಯೋಗವು ಅಭ್ಯರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲೂ ಸಹಾಯ ಮಾಡಲಿದೆ.
‘ಕೋವಿಡ್–19 ಪರಿಣಾಮ ರೈಲುಗಳ ಕಾರ್ಯಾಚರಣೆ ಪೂರ್ಣವಾಗಿ ಆರಂಭವಾಗದ ಕಾರಣ ಅಭ್ಯರ್ಥಿಗಳಿಗೆ ದೆಹಲಿಗೆ ಬರುವ ಮತ್ತು ಹೋಗುವ ವಿಮಾನ ಪ್ರಯಾಣದ ದರವನ್ನು ಮರುಪಾವತಿಸಲು ನಿರ್ಧರಿಸಲಾಗಿದೆ’ ಎಂದು ಆಯೋಗವು ಹೇಳಿದೆ.
‘ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆದಿರುವ ದಾಖಲೆ ಪತ್ರವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವ ಸಲುವಾಗಿ ನಿರ್ಬಂಧಿತ ಪ್ರದೇಶಗಳಲ್ಲಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಾಗಿದೆ’ ಎಂದೂ ಹೇಳಿದೆ.
2019ನೇ ಸಾಲಿನ ನಾಗರಿಕ ಸೇವೆಗಳ ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದಿದ್ದ 2,304 ಮಂದಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದ್ದ ವೇಳೆ ಕೋವಿಡ್ ಕಾರಣದಿಂದ ಲಾಕ್ಡೌನ್ ಹೇರಿಕೆಯಾಗಿತ್ತು. ಈ ಕಾರಣಕ್ಕೆ ಬಾಕಿ ಉಳಿದಿದ್ದ 623 ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಯನ್ನು ಮುಂದೂಡಲಾಗಿತ್ತು.