ದುಮಕಾ (ಜಾರ್ಖಂಡ್):‘ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ದೇಶದ ಜನರು ಒಪ್ಪಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳುಕಾಯ್ದೆ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿವೆ. ಕಾಂಗ್ರೆಸ್ ಪಾಕಿಸ್ತಾನದಂತೆ ವರ್ತಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಅಂಗವಾಗಿ ಇಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬಿಜೆಪಿಯ ಸಾರ್ವಜನಿಕ ಸಭೆಯಲ್ಲಿ ಮೋದಿ ಮಾತನಾಡಿದರು.
‘ಅಸ್ಸಾಂನ ಜನತೆ ಹಿಂಸಾಚಾರವನ್ನು ತಿರಸ್ಕರಿಸಿದ್ದಾರೆ. ಆದರೆ ಬೆಂಕಿ ಹಚ್ಚಿದವರು ಯಾರು ಎಂಬುದನ್ನು ಇಡೀ ದೇಶವೇ ಟಿ.ವಿ ವಾಹಿನಿಗಳಲ್ಲಿ ನೋಡಿದೆ. ಬೆಂಕಿ ಹಚ್ಚುತ್ತಿರುವವರು ಯಾರು ಎಂಬುದನ್ನು, ಅವರ ಬಟ್ಟೆಯಿಂದಲೇ ಗುರುತಿಸಬಹುದಾಗಿದೆ’ ಎಂದು ಮೋದಿ ಹೇಳಿದರು.
‘ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕಾಂಗ್ರೆಸ್ ಮತ್ತು ಅದರ ಜತೆಗಾರರು ಹಿಂಸಾಚಾರದ ಕಿಡಿ ಹೊತ್ತಿಸುತ್ತಿದ್ದಾರೆ. ವಿದೇಶಗಳಲ್ಲೂ ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಲಾಗುತ್ತಿದೆ. ಈ ಮೂಲಕ ದೇಶದ ಘನತೆಗೆ ಧಕ್ಕೆ ತರಲಾಗುತ್ತಿದೆ’ ಎಂದು ಮೋದಿ ಆರೋಪಿಸಿದರು.
‘ರಾಮ ಜನ್ಮಭೂಮಿ ವಿಚಾರದಲ್ಲಿ, ಕಾಶ್ಮೀರದ ವಿಶೇಷಾಧಿಕಾರ ತೆಗೆದು ಹಾಕಿದಾಗ ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಪಾಕಿಸ್ತಾನದವರು ಪ್ರತಿಭಟನೆ ನಡೆಸಿದ್ದರು. ಪೌರತ್ವ (ತಿದ್ದುಪಡಿ) ಕಾಯ್ದೆಯನ್ನೂ ವಿರೋಧಿಸಿ ಅಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅವರು ಭಾರತೀಯರು ಆಗಿದ್ದಿದ್ದರೆ, ರಾಯಭಾರಿ ಕಚೇರಿ ಒಳಗೆ ಹೋಗಿ ಮನವಿ ಪತ್ರ ಕೊಡುತ್ತಿದ್ದರು. ಪ್ರತಿಭಟನೆ ನಡೆಸುತ್ತಿರಲಿಲ್ಲ’ ಎಂದು ಮೋದಿ ಹೇಳಿದರು.
‘ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ದೊರೆತ ನಂತರ ಮೋದಿಯ ಬಗ್ಗೆ ಜನರ ನಂಬಿಕೆ ಗಟ್ಟಿಯಾಗುತ್ತಿದೆ. ಮಸೂದೆಗೆ ಅಂಗೀಕಾರ ದೊರೆತದ್ದು ಶೇ 1000ದಷ್ಟು ಸರಿಯಾಗಿದೆ’ ಎಂದು ಮೋದಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.