ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ದೊರೆತಿದೆ. ಯಾವ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎಂಬ ಅಧಿಕೃತ ಮಾಹಿತಿ ಇಲ್ಲಿದೆ.
ಶಿವಮೊಗ್ಗ ಜಿಲ್ಲೆ: ಶೇ 72.19 ರಷ್ಟು ಫಲಿತಾಂಶ
ಶಿವಮೊಗ್ಗ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ 10ನೇ ಸ್ಥಾನ ಪಡೆದಿದೆ. ಶೇ 72.19 ರಷ್ಟು ಫಲಿತಾಂಶ ಬಂದಿದೆ.
ಕಳೆದ ಬಾರಿ ಫಲಿತಾಂಶಕ್ಕೆ ಹೋಲಿಸಿದರೆ ಜಿಲ್ಲೆ ಈ ಬಾರಿ ಒಂದು ಸ್ಥಾನ ಕೆಳಗಿದೆ. ಕಳೆದ ವರ್ಷ 9 ನೇ ಸ್ಥಾನದಲ್ಲಿತ್ತು. ಶೇ 73.54ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
**
ಪಿಯು ಫಲಿತಾಂಶ: ರಾಯಚೂರು ಜಿಲ್ಲೆ 4 ಸ್ಥಾನ ಕುಸಿತ
ರಾಯಚೂರು: ದ್ವಿತೀಯ ವರ್ಷದ ಪದವಿ ಪೂರ್ವ ಕಾಲೇಜು ಫಲಿತಾಂಶ ಸಾಧನೆಯಲ್ಲಿ ಜಿಲ್ಲೆಯು ಸತತ ಎರಡನೇ ವರ್ಷವೂ ಕುಸಿತವಾಗಿದೆ. ಇತರೆ ಜಿಲ್ಲೆಗಳ ಫಲಿತಾಂಶ ಸಾಧನೆಗಳ ಪಟ್ಟಿಯಲ್ಲಿ 31 ನೇ ಸ್ಥಾನದಲ್ಲಿ ರಾಯಚೂರಿದೆ. 2018-19 ನೇ ಸಾಲಿನ ಫಲಿತಾಂಶದಲ್ಲಿ ಜಿಲ್ಲೆಯು 27 ನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು.
2017-18 ನೇ ಸಾಲಿನಲ್ಲಿ ಜಿಲ್ಲೆ 26 ನೇ ಸ್ಥಾನದಲ್ಲಿತ್ತು. ಪ್ರತಿಶತ ಸಾಧನೆಯಲ್ಲಿ ಓಮೂರು ವರ್ಷವೂ ಶೇ 56 ರಲ್ಲಿ ಸ್ಥಿರವಾಗಿರುವುದು ಗಮನಾರ್ಹ.
ಈ ವರ್ಷ ಶೇ 56.22 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಿಂದಿನ ವರ್ಷದ ಸಾಧನೆಗೆ ಹೋಲಿಕೆ ಮಾಡಿದರೆ 0.51% ರಷ್ಟು ಫಲಿತಾಂಶ ಕಡಿಮೆ ಬಂದಿದೆ.
**
ರಾಮನಗರಕ್ಕೆ 25ನೇ ಸ್ಥಾನ
ರಾಮನಗರ: ಜಿಲ್ಲೆಯು ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 60.96 ಫಲಿತಾಂಶದೊಂದಿಗೆ ಜಿಲ್ಲಾವಾರು 25ನೇ ಸ್ಥಾನಕ್ಕೆ ಕುಸಿದಿದೆ.
ಕಳೆದ ವರ್ಷ ರಾಮನಗರವು ಶೇ 62.08 ಫಲಿತಾಂಶದೊಂದಿಗೆ 24ನೇ ಸ್ಥಾನದಲ್ಲಿ ಇತ್ತು. ಈ ವರ್ಷ ಜಿಲ್ಲೆಯಲ್ಲಿ ಒಟ್ಟು 9581 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
**
ಚಾಮರಾಜನಗರ: ಬದಲಾಗದ ಸ್ಥಾನಮಾನ
ಚಾಮರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 69.29 ಫಲಿತಾಂಶ ದಾಖಲಿಸಿರುವ ಚಾಮರಾಜನಗರ ರಾಜ್ಯದಲ್ಲಿ 12 ಸ್ಥಾನ ಗಳಿಸಿದೆ.
ಕಳೆದ ವರ್ಷವೂ ಇದೇ ಸ್ಥಾನದಲ್ಲಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ 72.67) ಈ ಬಾರಿ ಶೇಕಡವಾರು ಫಲಿತಾಂಶ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಈ ಬಾರಿ 5686 ವಿದ್ಯಾರ್ಥಿಗಳು (ಖಾಸಗಿ, ಪುನರಾವರ್ತಿರರನ್ನು ಬಿಟ್ಟು) 5,686 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 3940 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶೇ 79.3, ವಿಜ್ಞಾನ ವಿಭಾಗದಲ್ಲಿ ಶೇ 75.93 ಮತ್ತು ಕಲಾ ವಿಭಾಗದಲ್ಲಿ ಶೇ 53.71 ಫಲಿತಾಂಶ ದಾಖಲಾಗಿದೆ.
**
ದ್ವಿತೀಯ ಪಿಯುಸಿ ಫಲಿತಾಂಶ: ಧಾರವಾಡ ಜಿಲ್ಲೆಯಲ್ಲಿ ಶೇ 67.31ರಷ್ಟು ವಿದ್ಯಾರ್ಥಿಗಳ ತೇರ್ಗಡೆ
ಧಾರವಾಡ: ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಶೇ 67.31ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 26,323 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಆದರೆ ಲಾಕ್ಡೌನ್ ಜಾರಿಗೊಂಡಿದ್ದರಿಂದ ಮಾರ್ಚ್ 23ರಂದು ನಡೆಯಬೇಕಿದ್ದ ಇಂಗ್ಲಿಷ್ ಪರೀಕ್ಷೆ ಜೂನ್ 18ರಂದು ನಡೆದಿತ್ತು. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲೂ ಜಿಲ್ಲೆಯ ವಿದ್ಯಾರ್ಥಿಗಳು ಕಳೆದ ಬಾರಿ (ಶೇ 62.49)ಗಿಂತ ಉತ್ತಮ ಸಾಧನೆ ಮಾಡಿದ್ದಾರೆ. ರಾಜ್ಯದಲ್ಲಿ ಧಾರವಾಡ 17ನೇ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ವಿಜ್ಞಾನ ವಿಷಯದಲ್ಲಿ 10,681 ವಿದ್ಯಾರ್ಥಿಗಳು, ಕಲಾ ವಿಷಯದಲ್ಲಿ 6,817 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಷಯದಲ್ಲಿ 8,825 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.
**
ಪಿಯು ಫಲಿತಾಂಶ: 29ನೇ ಸ್ಥಾನದಲ್ಲಿ ಮುಂದುವರಿದ ಕಲಬುರ್ಗಿ ಜಿಲ್ಲೆ
ಕಲಬುರ್ಗಿ: ಈ ಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲಿ ಜಿಲ್ಲೆ 29ನೇ ಸ್ಥಾನದಲ್ಲಿದ್ದು, ಶೇಕಡ 58.27ರಷ್ಟು ಸಾಧನೆ ಮಾಡಿದೆ.
2019ರ ಸಾಲಿನಲ್ಲಿ ಕೂಡ ಶೇಕಡ 56.09 ಫಲಿತಾಂಶದೊಂದಿಗೆ ರಾಜ್ಯಕ್ಕೆ 29ನೇ ಸ್ಥಾನವನ್ನೇ ಪಡೆದಿತ್ತು.
ಈ ಬಾರಿಯ ಫಲಿತಾಂಶದಲ್ಲಿ ಶೇಕಡ 2.18ರಷ್ಟು ಸುಧಾರಣೆ ಕಂಡಿದೆ.
**
ಪಿಯುಸಿ: ಮೈಸೂರು ಜಿಲ್ಲೆಗೆ ಶೇ 67.98 ಫಲಿತಾಂಶ
ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮೈಸೂರು ಜಿಲ್ಲೆಗೆ ಈ ಬಾರಿ 15 ನೇ ಸ್ಥಾನ ಲಭಿಸಿದೆ. ಶೇ 67.98 ರಷ್ಟು ಫಲಿತಾಂಶ ಬಂದಿದೆ.
ಮೈಸೂರು ಜಿಲ್ಲೆಗೆ ಕಳೆದ ಬಾರಿಯೂ 15 ನೇ ಸ್ಥಾನ ದೊರೆತಿತ್ತು. ಆದರೆ ಕಳೆದ ಬಾರಿಗಿಂತ (ಶೇ 68.55) ಫಲಿತಾಂಶ ಪ್ರಮಾಣದಲ್ಲಿ ಅಲ್ಪ ಕುಸಿತ ಕಂಡಿದೆ.
ಮೈಸೂರು ವಿದ್ಯಾರ್ಥಿಗಳ ಸಾಧನೆ:ಕುವೆಂಪು ನಗರದ ಬಿಜಿಎಸ್ ಮಹಿಳಾ ಕಾಲೇಜಿನ ಜೆ.ಎಸ್. ಬೃಂದಾ (596) ವಾಣಿಜ್ಯದಲ್ಲಿ ರಾಜ್ಯಕ್ಕೆ ದ್ವಿತೀಯ,ಗೋಪಾಲಶಿಶುವಿಹಾರ ಕಾಲೇಜಿನ ಎಂ.ಎಸ್. ಯಶಸ್ (594) ವಿಜ್ಞಾನದಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.