ಉತ್ತರಪ್ರದೇಶ: ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ನಿರಾಕರಿಸಿದ ಇಲ್ಲಿನ ಚಂದೌಲಿ ಜಿಲ್ಲೆಯ15 ವರ್ಷದ ಮುಸ್ಲಿಂಯುವಕನಿಗೆ, ನಾಲ್ವರು ಬೆಂಕಿ ಹಚ್ಚಿದ್ದಾರೆ.
ಯುವಕನನ್ನು ಇಲ್ಲಿನ ಕಾಶಿ ಕಬೀರ್ ಚೌರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೇ 60ರಷ್ಟು ದೇಹ ಸುಟ್ಟು ಹೋಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದರು.
ಶ್ರೀ ರಾಮ್ ಎಂದು ಘೋಷಣೆ ಕೂಗದ ಕಾರಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಆ ಯುವಕ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದು, ಆಸ್ಪತ್ರೆಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದಾಗ್ಯೂ ಆತನ ಹೇಳಿಕೆಗಳು ವ್ಯತಿರಿಕ್ತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಸೇತುವೆ ಮೇಲೆ ನಡೆದುಕೊಂಡು ಬರುತ್ತಿರುವಾಗ ನಾಲ್ವರು ನನ್ನನ್ನು ಅಪಹರಿಸಿದರು. ಇಬ್ಬರು ನನ್ನ ಕೈಗಳನ್ನು ಕಟ್ಟಿ ಹಾಕಿದರು. ಮೂರನೆಯ ವ್ಯಕ್ತಿ ನನ್ನ ಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾದರು’ ಎಂದು ಯುವಕ ‘ಆಜ್ ತಕ್’ ವಾಹಿನಿಗೆ ತಿಳಿಸಿದ್ದಾನೆ.
‘ಯುವಕ ಮನೆಗೆ ತಲುಪುವಷ್ಟರಲ್ಲಿ ಆತನ ದೇಹದ ಭಾಗಗಳು ಸಾಕಷ್ಟು ಸುಟ್ಟು ಹೋಗಿದ್ದವು’ ಎಂದು ಪೊಲೀಸರು ತಿಳಿಸಿದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದನ್ನು ಅನುಮಾನಾಸ್ಪದ ಪ್ರಕರಣವಾಗಿ ನೋಡುತ್ತಿದ್ದಾರೆ.