ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಹಾಸ್ಟೆಲ್ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿರುವ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗುರುವಾರ ಪ್ರತಿಭಟನೆ ನಡೆಸಿದೆ.
ಮಂಡಿ ಹೌಸ್ನಿಂದ ಶಾಸ್ತ್ರೀ ಭವನದಲ್ಲಿರುವ ಮಾನವ ಸಂಪನ್ಮೂಲ ಸಚಿವಾಲಯದತ್ತ ಹೋಗುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದಿದ್ದಾರೆ.
ಹಾಸ್ಟೆಲ್ ಶುಲ್ಕ ಹೆಚ್ಚಿಸಿರುವುದನ್ನು ಹಿಂಪಡೆಯಬೇಕು. ಅಷ್ಟೇ ಅಲ್ಲದೇ, ವಸ್ತ್ರಸಂಹಿತೆ, ಗ್ರಂಥಾಲಯದ ಓದಿನ ಸಮಯವನ್ನು ಕಡಿತಗೊಳಿಸಿರುವುದನ್ನೂ ಹಿಂಪಡೆಯಬೇಕು ಎಂದು ಎಬಿವಿಪಿ ಒತ್ತಾಯಿಸಿದೆ.
ಶಿವಸೇನೆ ಖಂಡನೆ
ಮುಂಬೈ ವರದಿ: ಜೆಎನ್ಯು ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರ ‘ಅಮಾನವೀಯ’ ಲಾಠಿ ಪ್ರಹಾರವನ್ನು ಖಂಡಿಸಿ, ಮೋದಿ ನೇತೃತ್ವದ ಸರ್ಕಾರವನ್ನು ಶಿವಸೇನೆ ಗುರುವಾರ ತರಾಟೆಗೆ ತೆಗೆದುಕೊಂಡಿದೆ.
ಅಂಧ ವಿದ್ಯಾರ್ಥಿಗಳ ಮೇಲೂ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಯಾವ ಸರ್ಕಾರವೂ ಇಷ್ಟೊಂದು ಕ್ರೂರ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದಿದೆ.