ನವದೆಹಲಿ: ಎಐಎಡಿಎಂಕೆಯಿಂದ 2016ರಲ್ಲಿ ಉಚ್ಚಾಟನೆಗೊಂಡಿದ್ದ ರಾಜ್ಯಸಭಾ ಸಂಸದೆ, ತಮಿಳುನಾಡಿನ ಶಶಿಕಲಾ ಪುಷ್ಪಾ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಪಕ್ಷದ ರಾಷ್ಟ್ರೀಯ ಘಟಕದ ಕಾರ್ಯದರ್ಶಿ ಪಿ. ಮುರಳೀಧರ ರಾವ್ ಮತ್ತು ಕೇಂದ್ರದ ಮಾಜಿ ಸಚಿವ ಪೊನ್ ರಾಧಾಕೃಷ್ಣನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಶಿಕಲಾ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಇನ್ನು ಕೆಲವು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. 2016ರಲ್ಲಿ ಅವರು ಡಿಎಂಕೆ ಸಂಸದರೊಬ್ಬರ ಜತೆ ವಾಗ್ವಾದ ನಡೆಸಿ ಅವರ ಕೆನ್ನೆಗೆ ಹೊಡೆದಿದ್ದ ಆರೋಪ ಎದುರಿಸುತ್ತಿದ್ದರು. ಆ ಬಳಿಕ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಲಾಗಿತ್ತು.
ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುರಳೀಧರ ರಾವ್ ಅವರು, ಶಶಿಕಲಾ ಅವರ ಸೇರ್ಪಡೆಯಿಂದಾಗಿ ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಆಗಲಿದೆ ಎಂದರು.