ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ದೆಹಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು 50 ಜನರಿಗಿಂತ ಹೆಚ್ಚು ಜನರು ಗುಂಪು ಸೇರುವುದಕ್ಕೆ ನಿಷೇಧ ಹೇರಿದೆ
ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಪ್ರಕಾರ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಂಬಂಧಿ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಸದ್ಯ ಮದುವೆ ಕಾರ್ಯಕ್ರಮಕ್ಕೆ ಮಾತ್ರ ಈ ನಿಷೇಧ ಅನ್ವಯವಾಗುವುದಿಲ್ಲ. ಸಾಧ್ಯವಾದರೆ ಮದುವೆ ಕಾರ್ಯಕ್ರಮ ಮುಂದೂಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಈ ನಿಷೇಧ ಆದೇಶತಕ್ಷಣವೇ ಜಾರಿಗೆ ಬರಲಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್ಬಾಗ್ನಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದ್ದು, ಈ ನಿಯಮ ಎಲ್ಲರಿಗೂ ಅನ್ವಯವಾಗಲಿದೆ. 50 ಜನರಿಗಿಂತ ಹೆಚ್ಚು ಜನರು ಗುಂಪು ಸೇರಬಾರದು ಎಂಬ ಆದೇಶ ಜಾರಿಗೆ ಬಂದ ನಂತರವೂ ಪ್ರತಿಭಟನೆಕಾರರು ಅಥವಾ ಇತರರು ಗುಂಪು ಸೇರಿದರೆ ಸಾಂಕ್ರಾಮಿಕ ರೋಗಗಳ ಕಾಯ್ದೆ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮೆಜಿಸ್ಟ್ರೇಟ್ (ಉಪ ಆಯುಕ್ತ) ಹೇಳಿದ್ದಾರೆ.
Several steps taken today to deal wid Corona. pic.twitter.com/9GgeRxOEED
— Arvind Kejriwal (@ArvindKejriwal) March 16, 2020
ಈಗಾಗಲೇ ಶಾಲೆ, ಕಾಲೇಜು, ಈಜುಕೊಳ ಮೊದಲಾದವುಗಳನ್ನು ಮುಚ್ಚಲಾಗಿದೆ. ಇವತ್ತು ಜಿಮ್, ನೈಟ್ ಕ್ಲಬ್ ಮತ್ತು ಸ್ಪಾಗಳನ್ನು ಮುಚ್ಚಲು ಆದೇಶ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ.
ಇಲ್ಲಿಯವರೆಗೆ ದೆಹಲಿಯಲ್ಲಿ ಕೋವಿಡ್ -19ಸೋಂಕಿನ 7 ಪ್ರಕರಣ ಪತ್ತೆಯಾಗಿದ್ದು ಇಬ್ಬರು ರೋಗಿಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಕಳೆದ ವಾರ 68ರ ಹರೆಯದ ಮಹಿಳೆಯೊಬ್ಬರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರು .
दिल्ली सरकार ने Coronavirus को फैलने से रोकने के लिए आज कुछ नए क़दम उठाए हैं https://t.co/bE6AeY8VvK
— Arvind Kejriwal (@ArvindKejriwal) March 16, 2020
ಅಧಿಕ ಸಂಖ್ಯೆಯಲ್ಲಿ ಜನ ಸೇರುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆಡಳಿತ ವ್ಯವಸ್ಥೆ ಸಿದ್ಧವಾಗಿದೆ ಎಂದಿದ್ದಾರೆ ಕೇಜ್ರಿವಾಲ್.
ಹೆಚ್ಚು ಜನರನ್ನು ಆಸ್ಪತ್ರೆಗೆ ಸೇರಿಸಬೇಕಾದ ಸಂದರ್ಭ ಬಂದರೆ 500 ಹಾಸಿಗೆಗಳ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಸೋಂಕು ಶಂಕಿತರನ್ನು ಪ್ರತ್ಯೇಕವಾಗಿ ನಿಗಾ ಇಡಲು ದೆಹಲಿಯ ಲೆಮನ್ ಟ್ರೀ, ರೆಡ್ ಫಾಕ್ಸ್ ಮತ್ತು ಐಬಿಐಎಸ್ ಹೋಟೆಲ್ನಲ್ಲಿಯೂ ವ್ಯವಸ್ಥೆ ಮಾಡಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.