ನವದೆಹಲಿ: ‘ಅಯೋಧ್ಯೆಯ ವಿವಾದಿತ ಜಾಗದ ಹಕ್ಕು ಮಂಡನೆಯಿಂದ ಹಿಂದೆ ಸರಿಯಲು ಸುನ್ನಿ ವಕ್ಫ್ ಮಂಡಳಿಯು ತೀರ್ಮಾನಿಸಿದ್ದು, ಆ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಅಲ್ಲಿ ರಾಮ ಮಂದಿರ ನಿರ್ಮಿಸುವುದಾದರೆ ನಮ್ಮ ವಿರೋಧವಿಲ್ಲ ಎಂದು ಹೇಳಿದೆ’ ಎಂದು ಸುಪ್ರೀಂ ಕೋರ್ಟ್ನ ಮಧ್ಯಸ್ಥಿಕಾ ಸಮಿತಿಯು ವರದಿಯಲ್ಲಿ ಹೇಳಿದೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಖಲೀಫುಲ್ಲಾ, ಅಧ್ಯಾತ್ಮ ಗುರು ಶ್ರೀಶ್ರೀ ರವಿಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ ಪಂಚು ಅವರನ್ನು ಒಳಗೊಂಡಿದ್ದ ಮಧ್ಯಸ್ಥಿಕಾ ಸಮಿತಿಯು ಸಿದ್ಧಪಡಿಸಿರುವ ವರದಿಯನ್ನು ಬುಧವಾರ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಸಲ್ಲಿಸಲಾಗಿದೆ.
‘ವಿವಾದಿತ ಜಾಗದ ಹಕ್ಕು ಮಂಡನೆಯಿಂದ ಹಿಂದೆ ಸರಿಯಲು ತೀರ್ಮಾನಿಸಿರುವ ಮಂಡಳಿಯು, ಪ್ರಸಕ್ತ ಅಯೋಧ್ಯೆಯಲ್ಲಿರುವ ಮಸೀದಿಯನ್ನು ಸರ್ಕಾರವೇ ನವೀಕರಿಸಬೇಕು, ಮಂಡಳಿಯು ಬೇರೆ ಯಾವುದಾದರೂ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಸಿದ್ಧ ಎಂದು ಒಪ್ಪಿಕೊಂಡಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
134 ವರ್ಷಗಳಷ್ಟು ಹಳೆಯ ವಿವಾದವನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಈ ವರದಿಯು ಮಹತ್ವದ ಪಾತ್ರವಹಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಯೋಧ್ಯೆಯಲ್ಲಿ ರಾಷ್ಟ್ರೀಯ ಭಾವೈಕ್ಯ ಸಂಸ್ಥೆಯೊಂದನ್ನು ಸ್ಥಾಪಿಸಬೇಕು ಎಂಬ ಸಲಹೆ ನೀಡಿರುವ ಸಮಿತಿಯು ಇಂಥ ಸಂಸ್ಥೆಯ ಸ್ಥಾಪನೆಗಾಗಿ ಭೂಮಿ ಒದಗಿಸುವಂತೆ ಮಹಾಂತ ಧರ್ಮದಾಸ್ ಹಾಗೂ ಪಾಂಡಿಚೇರಿಯ ಶ್ರೀ ಅರವಿಂದ ಆಶ್ರಮಗಳು ಮನವಿ ಸಲ್ಲಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.