ಕೊಲ್ಕತ್ತಾ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲೆಂದು ವಿಧಿಸಿರುವ ಲಾಕ್ಡೌನ್ ಜಾರಿಗೆ ರಾಜ್ಯ ಸರ್ಕಾರವು ಕೇಂದ್ರ ಭದ್ರತಾ ಪಡೆಗಳನ್ನು ಕರೆಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಖರ್ನೀಡಿರುವ ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ.
ಕೊರೊನಾ ವೈರಸ್ ಸೋಕು ತಡೆಯಲು ಲಾಕ್ಡೌನ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸಾಮಾಜಿಕ ಅಂತರ ಮತ್ತು ಧಾರ್ಮಿಕ ಸಮಾರಂಭಗಳನ್ನು ತಡೆಯಲು ವಿಫಲರಾಗಿರುವ ಪೊಲೀಸರು ಮತ್ತು ಅಧಿಕಾರಿಗಳನ್ನು ಮನೆಗೆ ಕಳಿಸಬೇಕು. ಲಾಕ್ಡೌನ್ ನಿರ್ಬಂಧಗಳನ್ನು ಯಶಸ್ವಿಯಾಗಿ ಜಾರಿ ಮಾಡಲು ಪ್ಯಾರಾ ಮಿಲಿಟರಿ ದಳವನ್ನು ರಾಜ್ಯಕ್ಕೆ ಕರೆಸಬೇಕಿದೆ' ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದರು.
Lockdown protocol has to be thoroughly implemented to ward off #coronavirus.
— Governor West Bengal Jagdeep Dhankhar (@jdhankhar1) April 15, 2020
Police and administration @MamataOfficial failing to effect 100% #SocialDistancing or curbing religious congregations be shown door.
Lockdown must succeed-examine central para forces requisitioning!
ಅತ್ಯಗತ್ಯ ವಸ್ತುಗಳ ಖರೀದಿಗೆಂದು ಮನೆಗಳಿಂದ ಹೊರಗೆ ಬರುತ್ತಿರುವ ಜನರೂ ಸಾಮಾಜಿಕ ಅಂತರ ಪಾಲಿಸುವಂತೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.ಕೊಲ್ಕತ್ತಾ ನಗರ ಪೊಲೀಸರು ಮತ್ತು ಪಶ್ಚಿಮ ಬಂಗಾಳ ಪೊಲೀಸರು ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೆ ಹಲವು ಕ್ರಮಗಳನ್ನು ತೆಗೆದುಕೊಂಡಿರುವ ಹೊತ್ತಿನಲ್ಲಿ ರಾಜ್ಯಪಾಲರು ಈ ರೀತಿ ಟ್ವೀಟ್ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ರಾಜ್ಯದ ವಿವಿಧೆಡೆ ಪೊಲೀಸರು ಲಾಕ್ಡೌನ್ ನಿರ್ಬಂಧ ಉಲ್ಲಂಘಿಸುವವರನ್ನು ಗುರುತಿಸಲುಡ್ರೋಣ್ ಬಳಕೆಗೆ ಮುಂದಾಗಿದ್ದಾರೆ. ಬೀದಿಗಳಲ್ಲಿ ಪೊಲೀಸರು ಲೌಡ್ಸ್ಪೀಕರ್ಗಳನ್ನು ಬಳಸಿ ಜನರಿಗೆ ಮನೆಯೊಳಗೆ ಇರುವಂತೆ ಹೇಳುತ್ತಿದ್ದಾರೆ.
ಕಳೆದ ಕೆಲ ದಿನಗಳಲ್ಲಿ 1,14 ಮಾರುಕಟ್ಟೆಗಳನ್ನು ಸ್ಥಳಾಂತರಿಸಲಾಗಿದೆ. 963 ಮಾರುಕಟ್ಟೆಗಳನ್ನು ವಿಸ್ತರಿಸಲಾಗಿದೆ. ಜನದಟ್ಟಣೆ ಹೆಚ್ಚಾಗಿರುವ 256 ಮಾರುಕಟ್ಟೆಗಳ ಸ್ಥಳಾಂತರಕ್ಕೆ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
'ಮಾನವೀಯ ನೆಲೆಯಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಬೇಕು' ಎಂದು ಮೊದಲಿನಿಂದಲೂ ಹೇಳುತ್ತಿರುವ ಮಮತಾ ಬ್ಯಾನರ್ಜಿ ಹಲವು ಬಾರಿ ರಾಜ್ಯಪಾಲರೊಂದಿಗೆ ಸಂಘರ್ಷಕ್ಕೆ ಇಳಿದಿದ್ದರು. ರಾಜ್ಯಪಾಲರ ನಡೆಯನ್ನು ತೃಣಮೂಲ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
'ಪಶ್ಚಿಮ ಬಂಗಾಳ ಸರ್ಕಾರವನ್ನು ಟೀಕಿಸುವುದೇ ರಾಜ್ಯಪಾಲರ ಫುಲ್ಟೈಂ ಕೆಲಸವಾಗಿದೆ. ಅವರನ್ನು ನಿರ್ಲಕ್ಷಿಸಿ, ನಮ್ಮ ಕೆಲಸ ನಾವು ಮಾಡಿಕೊಂಡಿರೋಣ ಎಂದುಕೊಂಡಿದ್ದೇವೆ' ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಸ್ನೇಹಾಶಿಶ್ ಚಕ್ರವರ್ತಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.