ಅಲಹಾಬಾದ್: ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಅವರ ಮಗಳು ಸಾಕ್ಷಿ ಮತ್ತು ಅಳಿಯ ಅಜಿತೇಶ್ ಕುಮಾರ್ ಮೇಲೆ ಹೈಕೋರ್ಟ್ ಆವರಣದಲ್ಲೇ ಸೋಮವಾರ ಹಲ್ಲೆ ನಡೆದಿದೆ.
‘ಅಂತರ್ಜಾತಿ ವಿವಾಹವಾಗಿದ್ದಕ್ಕೆ ತಮ್ಮ ಜೀವಕ್ಕೆ ತಂದೆಯಿಂದಲೇ ಆಪಾಯವಿದೆ. ಆದ್ದರಿಂದ ಶಾಂತಿಯಿಂದ ಜೀವನ ಮಾಡಲು ರಕ್ಷಣೆ ಕೊಡಿ’ ಎಂದು ದಂಪತಿ ಕೋರ್ಟ್ ಮೊರೆ ಹೋಗಿದ್ದರು.ನ್ಯಾಯಮೂರ್ತಿ ಸಿದ್ಧಾರ್ಥ್ ವರ್ಮಾ ಅವರು ಭದ್ರತೆ ಒದಗಿಸಲು ಆದೇಶಿಸಿದ್ದರು. ಈ ಪ್ರಕರಣದ ವಿಚಾರಣೆ ಸೋಮವಾರ ಆರಂಭವಾಗಿತ್ತು. ವಿಚಾರಣೆ ಮುಗಿಸಿ ನ್ಯಾಯಾಲಯದ ಕೊಠಡಿಯಿಂದ ದಂಪತಿ ಹೊರಬಂದ ತಕ್ಷಣವೇ ಕೆಲವು ವಕೀಲರು ಇವರ ಮೇಲೆ ತೀವ್ರ ಹಲ್ಲೆ ನಡೆಸಿದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಅಜಿತೇಶ್ ಕುಮಾರ್ ಜತೆ ವಿವಾಹವಾಗಿದ್ದರ ವಿಡಿಯೊವನ್ನು ಸಾಕ್ಷಿ ಮಿಶ್ರಾ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದರು. ಮತ್ತೊಂದು ವಿಡಿಯೊದಲ್ಲಿ ತಾವು ಎಲ್ಲಿದ್ದೇವೆ ಎಂಬುದು ತಿಳಿದರೆ ತಂದೆ, ಸಹೋದರ ಮತ್ತು ಅವರ ಗೆಳೆಯನಿಂದ ಜೀವಕ್ಕೆ ಅಪಾಯ ಇರುವ ಬಗ್ಗೆ ತಿಳಿಸಿದ್ದರು. ಬ್ರಾಹ್ಮಣ ಸಮುದಾಯದಕ್ಕೆ ಸೇರಿರುವ ಸಾಕ್ಷಿ, ದಲಿತ ಕುಟುಂಬದ ದೇಶಸ್ಥಾನದಲ್ಲಿ ಅಜಿತೇಶ್ ಕೈ ಹಿಡಿದಿದ್ದಕ್ಕೆ ತಂದೆ ಆಕ್ರೋಶಗೊಂಡಿರುವುದಾಗಿ ಹೇಳಿದ್ದರು.
ತಮ್ಮ ತಂದೆ ಇಲ್ಲವೇ ಪೊಲೀಸರಿಂದ ಕಿರುಕುಳವಾಗಬಾರದು ಎಂದು ಕೋರ್ಟ್ ಮೊರೆ ಹೋಗಿದ್ದರು.
ಹೊಸ ತಿರುವು ಪಡೆದ ಪ್ರಕರಣ
ಲಖನೌ: ಶಾಸಕರ ಮಗಳ ವಿವಾಹ ಪ್ರಕರಣ ಉತ್ತರ ಪ್ರದೇಶದಲ್ಲಿ ಹೊಸ ತಿರುವು ಪಡೆದಿದೆ.ವಿವಾಹದ ಬಗ್ಗೆ ಶಾಸಕ ಮಿಶ್ರಾ ಅವರ ಆಪ್ತ ಮತ್ತೊಬ್ಬ ಬಿಜೆಪಿ ಶಾಸಕ ಶ್ಯಾಮ್ ಬಿಹಾರಿ ಲಾಲ್ ಜತೆ ನಡೆಸಿದ್ದಾನೆ ಎನ್ನಲಾದ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಿಶ್ರಾಗೆ ‘ಪಾಠ’ ಕಲಿಸಲು ಬಯಸಿದ್ದಾಗಿ, ದಲಿತ ಯುವಕನ ಜತೆ ಮಗಳು ವಿವಾಹವಾಗಿದ್ದರಿಂದ ಮಿಶ್ರಾಗೆ ಸಾಮಾಜಿಕ ಅವಮಾನವಾಗಿದೆ. ಇದರಿಂದ ಅವರು ಆತ್ಮಹತ್ಯೆಗೆ ಮುಂದಾಗಬಹುದು’ ಎಂದು ಲಾಲ್ ಸಂಭಾಷಣೆಯಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಆಸಕ್ತಿಯ ವಿಷಯವೆಂದರೆಸಾಕ್ಷಿ ವಿವಾಹವಾಗಿರುವ ಅಜಿತೇಶ್, ಲಾಲ್ ಅವರ ಸಂಬಂಧಿಯಾಗಿದ್ದಾರೆ. ಲಾಲ್ ಅವರು ಹರ್ದೋಯಿಯ ಬಿಜೆಪಿ ಶಾಸಕ.
ಲಾಲ್ ಮತ್ತು ಮತ್ತೊಬ್ಬ ಬಿಜೆಪಿ ಶಾಸಕ, ಮಿಶ್ರಾ ಅವರ ವಿರುದ್ಧ ‘ಪಿತೂರಿ’ ನಡೆಸಿ ಅವರ ರಾಜಕೀಯ ಜೀವನವನ್ನು ಮುಗಿಸಲು ಈ ಪ್ರೇಮ ವಿವಾಹದ ಸಂಚು ಮಾಡಿದ್ದಾರೆ ಎಂದು ಮಿಶ್ರಾ ಅವರ ಆಪ್ತ ಆರೋಪಿಸಿದ್ದಾರೆ. ಈ ಎಲ್ಲ ಆರೋಪಗಳನ್ನು ಲಾಲ್ ಅವರು ಅಲ್ಲಗಳೆದಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆದೇಶಿಸಿದ್ದಾರೆ. ಅಲ್ಲದೆ ಮಿಶ್ರಾ ಅವರು ತವರು ಜಿಲ್ಲೆ ಬರೇಲಿಯ ಸ್ಥಳೀಯ ಬಿಜೆಪಿ ನಾಯಕರಿಂದ ವರದಿ ನೀಡುವಂತೆ ಸೂಚಿಸಿದ್ದಾರೆ.
ಅಪಹರಣವಾದ ದಂಪತಿ ರಕ್ಷಣೆ
ವಿಚಾರಣೆಗೆ ಬಂದಿದ್ದ ಸಾಕ್ಷಿ ಮತ್ತು ಅಜಿತೇಶ್ ಅವರನ್ನುನ್ಯಾಯಾಲಯದ ಗೇಟ್ ಸಮೀಪದಿಂದ ಅಪಹರಣ ಮಾಡಲಾಗಿತ್ತು.
ಆದರೆ ಕೆಲವು ಗಂಟೆಗಳಲ್ಲಿ ಇವರನ್ನು ಅಲಹಾಬಾದ್ ನ್ಯಾಯಾಲಯದಿಂದ 100 ಕಿ.ಮೀ ದೂರದ ಫತೇಪುರ ಜಿಲ್ಲೆಯಲ್ಲಿ ರಕ್ಷಣೆ ಮಾಡಲಾಯಿತು.
ನ್ಯಾಯಾಲಯಕ್ಕೆ ದಂಪತಿ ಬರುವುದನ್ನು ಖಾತ್ರಿ ಮಾಡಿಕೊಂಡಿದ್ದ ಸಾಕ್ಷಿ ತಂದೆ ಹಾಗೂ ಚಿಕ್ಕಪ್ಪ ಗೇಟ್ ಸಮೀಪ ಎಸ್ಯುವಿಯಲ್ಲಿ ಕಾದಿದ್ದರು. ಅವರಿಬ್ಬರೂ ಬರುತ್ತಿದ್ದಂತೆ ಕಾರಿಗೆ ಒತ್ತಾಯವಾಗಿ ಹತ್ತಿಸಿಕೊಂಡು ಅಪಹರಣ ಮಾಡಿದರು.ಅಪಹರಣ ಮಾಡಿದವರನ್ನು ಬಂಧಿಸಲಾಗಿದೆ, ದಂಪತಿಗೆ ರಕ್ಷಣೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.