ನವದೆಹಲಿ:ಕೇಂದ್ರದ ಮಾಜಿ ಸಚಿವ, ಬಿಜೆಪಿ ರಾಜ್ಯಸಭಾ ಸದಸ್ಯಬೀರೇಂದರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ರಾಜ್ಯಸಭೆ ಸದಸ್ಯತ್ವದ ಅವಧಿ 2022ರ ಆಗಸ್ಟ್ 1ರವರೆಗೆ ಇತ್ತು.
‘ಹರಿಯಾಣವನ್ನು ಪ್ರತಿನಿಧಿಸುತ್ತಿರುವ ಚೌಧರಿ ಬೀರೇಂದರ್ ಸಿಂಗ್ ಅವರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ರಾಜ್ಯಸಭೆಯ ಸಭಾಪತಿಗಳು ಅದನ್ನು 2020ರ ಜನವರಿ 20ರಿಂದ ಅನ್ವಯವಾಗುವಂತೆ ಅಂಗೀಕರಿಸಿದ್ದಾರೆ’ ಎಂದು ರಾಜ್ಯಸಭೆಯ ಪ್ರಕಟಣೆ ತಿಳಿಸಿದೆ.
ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಸಂದೇಶ:2019ರ ಲೋಕಸಭೆ ಚುನಾವಣೆಯಲ್ಲಿ ಬೀರೇಂದರ್ ಅವರಪುತ್ರನಿಗೆ ಹಿಸ್ಸಾರ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಕ್ಕಿತ್ತು. ಆ ಸಂದರ್ಭದಲ್ಲಿ ಅವರು ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಸಂದೇಶ ರವಾನಿಸಲು ಸಚಿವ ಸ್ಥಾನ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ, ರಾಜ್ಯಸಭೆ ಸದಸ್ಯತ್ವ ತ್ಯಜಿಸಲು ಆಗ ಬಿಜೆಪಿ ಹೈಕಮಾಂಡ್ ಒಪ್ಪಿರಲಿಲ್ಲ.
ಸುಮಾರು ನಾಲ್ಕು ದಶಕ ಕಾಂಗ್ರೆಸ್ ಪಕ್ಷದಲ್ಲಿದ್ದ ಬೀರೇಂದ್ರ, 2014ರಲ್ಲಿ ಬಿಜೆಪಿ ಸೇರಿದ್ದರು. ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅವರು ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಸಚಿವರಾಗಿದ್ದರು. 2016ರಲ್ಲಿ ಅವರನ್ನು ಉಕ್ಕು ಖಾತೆ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.