ಕೋಲ್ಕತ್ತ: ಪಶ್ಚಿಮ ಬಂಗಾಳದ ಘಟಾಲ್ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತೆಯರು ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಅವರನ್ನು ಮತಗಟ್ಟೆಯಿಂದ ಹೊರದಬ್ಬಿದ ಘಟನೆ ಭಾನುವಾರ ವರದಿಯಾಗಿದೆ.
ಘಟಾಲ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳಲ್ಲಿ 6ನೇ ಹಂತದ ಮತದಾನ ಭಾನುವಾರ ನಡೆದಿದೆ.
ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರ ಆಪ್ತೆ, ಮಾಜಿ ಐಪಿಎಸ್ ಆಧಿಕಾರಿಯಾಗಿದ್ದ ಭಾರತಿ ಘೋಷ್, ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಚಂದ್ಖಲಿ ಪ್ರದೇಶದಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತಗಟ್ಟೆ ಏಜೆಂಟ್ಗೆ ಪ್ರವೇಶ ಅನುಮತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ನಾನು ಅಭ್ಯರ್ಥಿ, ನನ್ನನ್ನು ಹಿಡಿದು ಹೊರದಬ್ಬಲಾಯಿತು.ನನ್ನ ಮೇಲೆ ದೌರ್ಜನ್ಯವೆಸಗಿದ ಮತ್ತು ಮತಗಟ್ಟೆ ಏಜೆಂಟ್ಗೆ ಪ್ರವೇಶ ನಿರಾಕರಿಸಿದ ವ್ಯಕ್ತಿಗಳನ್ನು ಬಂಧಿಸಿ ಎಂದು ಘೋಷ್ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.
ಟಿಎಂಸಿ ಬೆಂಬಲಿಗರು ನನ್ನನ್ನು ಹೊರ ನೂಕಿದರು. ಕೇಶ್ಪುರ್ ಪ್ರದೇಶದಲ್ಲಿ ಯಾವುದೇ ಮತಗಟ್ಟೆ ಏಜೆಂಟ್ರನ್ನು ಅವರು ಒಳಬಿಡುವುದಿಲ್ಲ, ಈ ಮಹಿಳೆಯರನ್ನೆಲ್ಲಾ ಟಿಎಂಸಿ ನಿಯೋಜಿಸಿದೆ.ನಾನು ಚುನಾನಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಲಿದ್ದೇನೆ.
ಇಲ್ಲಿನ ಪೋಲಿಸರು ಮೂಕಪ್ರೇಕ್ಷಕರಂತೆ ನಿಂತಿದ್ದರು. ಅವರು ಮಹಿಳಾ ಪೊಲೀಸರನ್ನೂ ಕರೆಯಲಿಲ್ಲ ಎಂದು ಘೋಷ್ ಆರೋಪಿಸಿದ್ದಾರೆ.
ಘೋಷ್ ಅವರು ಮತಗಟ್ಟೆಗೆ ಪ್ರವೇಶಿಸದಂತೆ ಮಹಿಳೆಯರು ತಡೆದಿದ್ದಾರೆ. ಆದರೆ ಆ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಅಲ್ಲಿ ಇಲ್ಲದೇ ಇರುವುದರಿಂದ ನಾವು ಮಧ್ಯಪ್ರವೇಶಿಸಿಲ್ಲ.ನಾವು ಅಸಹಾಯಕರು ಎಂದು ಮತಗಟ್ಟೆಯಲ್ಲಿ ನಿಯೋಜಿಸಿದ್ದ ಸಿಆರ್ಪಿಎಫ್ ಪಡೆಯ ಸಿಬ್ಬಂದಿಯೊಬ್ಬರು ಸುದ್ದಿವಾಹಿನಿಯಲ್ಲಿ ಹೇಳಿದ್ದಾರೆ.
ಮತಗಟ್ಟೆ ಪ್ರವೇಶಿಸಲು 45 ನಿಮಿಷಗಳ ಕಾಲ ಘೋಷ್ ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿದ್ದ ಮಹಿಳೆಯರು ಅವರನ್ನು ಒಳಗೆ ಬಿಡಲಿಲ್ಲ, ಇದೆಲ್ಲಾ ಟಿಎಂಸಿಯ ಕುತಂತ್ರ ಎಂದು ಆರೋಪಿಸಿ ಘೋಷ್ ಅಲ್ಲಿಂದ ತೆರಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಭಾರತಿ ಮೇಲೆ ಹಲ್ಲೆ, ಕಾರಿಗೆ ಹಾನಿ
West Bengal: Vehicles in BJP Candidate from Ghatal, Bharti Ghosh's convoy vandalized. BJP has alleged that TMC workers are behind the attack pic.twitter.com/xdsJNkKhV8
— ANI (@ANI) May 12, 2019
ಪಶ್ಚಿಮ ಬಂಗಾಳದ ಕೇಶ್ಪುರ್ನಲ್ಲಿ ಭಾನುವಾರ ಬೆಳಗ್ಗೆ ಟಿಎಂಲಿ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಭಾರತಿ ಘೋಷ್ ಆರೋಪಿಸಿದ್ದಾರೆ.
ಭಾರತಿ ಅವರ ವಿರುದ್ದಟಿಎಂಸಿ ಕಾರ್ಯಕರ್ತರು ಪ್ರತಿಭಟಿಸಿದ್ದು, ವಾಹನಕ್ಕೆ ಹಾನಿ ಮಾಡಿದ್ದಾರೆ.ಈ ಸಂಘರ್ಷದಲ್ಲಿ ಭಾರತಿ ಅವರ ಭದ್ರತಾ ಸಿಬ್ಬಂದಿಯ ತಲೆಗೆ ಗಾಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.