ನವದೆಹಲಿ: ವಿಡಿಯೊಕಾನ್ ಪ್ರಕರಣ ಸಂಬಂಧ ಐಸಿಐಸಿಐ ಬ್ಯಾಂಕ್ನ ಮಾಜಿ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚರ್ ಸೇರಿದಂತೆ ಮೂವರ ಮೇಲೆ ಎಫ್ಐಆರ್ ದಾಖಲಿಸಿದ್ದ ಸಿಬಿಐ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ಬ್ಯಾಂಕಿಂಗ್ ಮತ್ತು ಭದ್ರತಾ ವಂಚನಾಘಟಕದ ಸುಧಾಂಶು ಧಾರ್ ಮಿಶ್ರಾ ಅವರನ್ನು ರಾಂಚಿಯ ಆರ್ಥಿಕ ಅಪರಾಧ ಶಾಖೆಗೆ ವರ್ಗಾಯಿಸಲಾಗಿದೆ.
ಎಫ್ಐಆರ್ ದಾಖಲಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಜ. 25ರಂದು ಐಸಿಐಸಿಐ ಬ್ಯಾಂಕ್ನ ಮಾಜಿ ಸಿಇಒ ಚಂದಾ ಕೊಚ್ಚರ್, ಅವರ ಗಂಡ ದೀಪಕ್ ಕೊಚ್ಚರ್ ಮತ್ತು ವಿಡಿಯೊಕಾನ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ದೂತ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.
ವೇಣುಗೋಪಾಲ್ ಮತ್ತು ದೀಪಕ್ ಕೊಚ್ಚರ್ ವಿರುದ್ಧ ಪ್ರಾಥಮಿಕ ತನಿಖೆಗಾಗಿ ಸಿಬಿಐ ಹತ್ತು ತಿಂಗಳ ಹಿಂದೆ ಪ್ರಕರಣ ದಾಖಲಿಸಿಕೊಂಡಿತ್ತು. ₹3,250 ಕೋಟಿ ಸಾಲ ಮಂಜೂರಾತಿಯಲ್ಲಿ ಅಕ್ರಮ ಆಗಿರಬಹುದು ಎಂಬ ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.