ಪಣಜಿ: ಬೆಳೆಗಳ ಇಳುವರಿ ಹೆಚ್ಚಳಕ್ಕೆ ಗೋವಾದ ಕೃಷಿ ಸಚಿವ ವಿಜೈ ಸರ್ದೇಸಾಯಿ ಹೊಸ ವಿಧಾನವನ್ನು ಪ್ರಚಾರ ಮಾಡುತ್ತಿದ್ದಾರೆ. ಇದು ಬಹಳ ಕಷ್ಟಕರವಾದುದ್ದಲ್ಲ. ಹೊಲ–ಗದ್ದೆಯಲ್ಲಿ ಕುಳಿತು ‘ಓಂ ರೋಂ ಜುಂ ಸ್ಹಾ’ ಎಂಬ ವೈದಿಕ ಮಂತ್ರವನ್ನು ಪಠಣ ಮಾಡಿ ಕಾಸ್ಮಿಕ್ ಶಕ್ತಿಯನ್ನು ಬೆಳೆಗಳಿಗೆ ಪಸರಿಸಿ, ಆಗ ಇಳುವರಿ ಹೆಚ್ಚಲಿದೆ ಎಂಬಸಂದೇಶಗಳನ್ನು ಸಚಿವರು ಜನರಿಗೆ ನೀಡುತ್ತಿದ್ದಾರೆ.
ನಿವೃತ್ತ ಕೆಮಿಕಲ್ ಎಂಜಿನಿಯರ್ ಡಾ.ಅವಧೂತ್ ಶಿವಾನಂದ್ ಎಂಬುವವರು ಶಿವ ಯೋಗ ಪ್ರತಿಷ್ಠಾನ ಸ್ಥಾಪಿಸಿ, ದೇವಮಾನವ ಎಂದು ಘೋಷಿಸಿಕೊಂಡು, ಈ ಶಿವಯೋಗ ಕಾಸ್ಮಿಕ್ ಕೃಷಿವಿಧಾನ ಸಂಶೋಧಿಸಿದ್ದಾರಂತೆ. ಇದನ್ನು ಪ್ರಚಾರ ಮಾಡಲು ಸಚಿವರ ಪತ್ನಿಯು ಪ್ರತಿಷ್ಠಾನದೊಂದಿಗೆ ಕೈಜೋಡಿಸಿದ್ದಾರೆ.
‘ಶಿವಯೋಗಿಣಿ ಆಗಿರುವ ನನ್ನ ಪತ್ನಿ ಉಷಾ, ಈ ಕೃಷಿ ವಿಧಾನದ ಕುರಿತು ತಿಳಿಸಿದಾಗ ಮೊದಲಿಗೆ ನಾನೂ ಸಂಶಯಪಟ್ಟೆ. ಈ ವಿಧಾನದ ಹಿಂದೇ ಹಲವಾರು ಸಂಶೋಧನೆ ನಡೆದಿವೆ ಎಂದು ತಿಳಿದ ಬಳಿಕ, ಇದು ಜಾದೂವಲ್ಲವೆಂದು ತಿಳಿಯಿತು ಎಂದು ವಿಜೈ ಸರ್ದೇಸಾಯಿ ಹೇಳಿರುವುದಾಗಿ’ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರೈತರ ಹಿತದೃಷ್ಟಿಯಿಂದ ಹಣಕಾಸು ಖರ್ಚಿಲ್ಲದ ಎಲ್ಲ ಕೃಷಿ ವಿಧಾನಗಳನ್ನು ಬೆಂಬಲಿಸುವುದಾಗಿ ಸರ್ದೇಸಾಯಿ ಹೇಳಿದ್ದಾರಂತೆ.
‘ರಾಕ್ಬ್ಯಾಂಡ್ ಷೋ ಅಥವಾ ಸೌಂದರ್ಯ ಸ್ಪರ್ಧೆಗಳಿಂದಲೂ ಕೃಷಿಗೆ ಅನುಕೂಲವಾಗಲಿದೆ ಎಂದು ನನಗೆ ಮನದಟ್ಟು ಮಾಡಿಕೊಟ್ಟರೆ, ಅವುಗಳನ್ನು ಜಮೀನುಗಳಲ್ಲೂ ಆಯೋಜಿಸಲಿದ್ದೇನೆ. ಇಂತಹ ವಿಧಾನಗಳು ಜನರಲ್ಲಿ ಕೃಷಿಯ ಬಗ್ಗೆ ಕುತೂಹಲ ಉಂಟು ಮಾಡುತ್ತವೆ. ಎಲ್ಲರು ವ್ಯವಸಾಯದೆಡೆಗೆ ಆಕರ್ಷಿತರಾಗುವಂತೆ ಮಾಡುವ ಇಂತಹ ವಿಧಾನಗಳತ್ತ ಗಮನ ಹರಿಸಬೇಕಿದೆ’ ಎಂದು ಸರ್ದೇಸಾಯಿ ಹೇಳಿದ್ದಾರೆ.
ಗೋವಾದ ಹಲವು ರೈತರಿಗೆ ವಾಟ್ಸ್ಅಪ್ ಮೂಲಕಇತ್ತೀಚೆಗೆ ‘ಶಕ್ತಿ’ ಎಂಬ ವಿಡಿಯೊ ಬಂದಿದೆ. ಅದರಲ್ಲಿ ಬಾಬಾಜಿ ಎನಿಸಿಕೊಂಡಿರುವ ಶಿವಾನಂದ್ ಮಧ್ಯಪ್ರದೇಶದ ಪ್ರದೇಶವೊಂದರ ಹೊಲಗಳಲ್ಲಿ ರೈತರೊಂದಿಗೆ ಚಕಳಮಕಳ ಹಾಕಿಕೊಂಡು ಕುಳಿತು ಮಂತ್ರಗಳನ್ನು ಪಠಿಸುತ್ತಿದ್ದಾರೆ. ಆ ಮಂತ್ರಗಳಿಂದ ಬೆಳೆಗಳ ಮೇಲಾಗುವ ಪರಿಣಾಮವನ್ನು ವಿವರಿಸುತ್ತಿದ್ದಾರೆ ಎಂಬ ಅಂಶ ಎಕ್ಸ್ಪ್ರೆಸ್ ವರದಿಯಲ್ಲಿದೆ.