ಪಟ್ನಾ: ‘ಈಗಲೂ ಅಲ್ಪಸಂಖ್ಯಾತರ ಮೊದಲ ಆದ್ಯತೆ ಕಾಂಗ್ರೆಸ್’ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹಾಗೂ ಲೋಕಜನಶಕ್ತಿ ಪಕ್ಷದ (ಎಲ್ಜೆಪಿ) ಅಧ್ಯಕ್ಷ ರಾಂ ವಿಲಾಸ್ ಪಾಸ್ವಾನ್ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.
ಈಗ ಕಾಲ ಬದಲಾಗಿದ್ದು, ಮತದಾರರು ಜಾಗೃತರಾಗಿದ್ದಾರೆ. ಅನಕ್ಷರಸ್ಥರು ಮುಖ್ಯಮಂತ್ರಿಯಾಗುವ ದಿನ ಈಗ ಇಲ್ಲ ಎಂದು ಅವರು ಆರ್ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಹೆಬ್ಬಟ್ಟು ಒತ್ತುವ ಮಹಿಳೆ’ (ಅನಕ್ಷರಸ್ಥೆ) ಬಿಹಾರದ ಮುಖ್ಯಮಂತ್ರಿಯಾಗಿದ್ದರು ಎಂದು ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹೆಸರು ಪ್ರಸ್ತಾಪಿಸದೇ ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಪಾಸ್ವಾನ್ ಅವರ ಪುತ್ರಿ ಆಶಾ ಪಾಸ್ವಾನ್ ಅವರು ತಮ್ಮ ತಂದೆಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹೇಳಿಕೆಗೆ ಕ್ಷಮೆ ಕೇಳದಿದ್ದರೆ ಎಲ್ಜೆಪಿ ಕಚೇರಿ ಎದುರು ಧರಣಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದಾರೆ.
‘ರಾಬ್ಡಿ ದೇವಿ ಮಾತ್ರವಲ್ಲ, ನನ್ನ ತಾಯಿಯೂ ಅನಕ್ಷರಸ್ಥೆ. ಹೀಗಾಗಿಯೇ ರಾಂ ವಿಲಾಸ್ ಪಾಸ್ವಾನ್ ಅವರು ನನ್ನ ತಾಯಿ ಯನ್ನು ತೊರೆದಿದ್ದಾರೆ’ ಎಂದು ಆಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪಾಸ್ವಾನ್ ಅವಕಾಶವಾದಿ ನಾಯಕ. 2009ರ ಲೋಕಸಭೆ ಚುನಾವಣೆಯಲ್ಲಿ ಸೋತಾಗ ರಾಬ್ಡಿ ದೇವಿ ಅವರು ಸಹಾಯ ಮಾಡಿದ್ದನ್ನು ಅವರು ಮರೆತಿದ್ದಾರೆ’ ಎಂದು ಲಾಲು ಅವರ ಆಪ್ತ, ಆರ್ಜೆಡಿ ಶಾಸಕ ಭಾಯಿ ಬೀರೇಂದ್ರ ತಿರುಗೇಟು ನೀಡಿದ್ದಾರೆ.