ಇಂದೋರ್(ಮಧ್ಯಪ್ರದೇಶ):ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಎಂದೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಪಕ್ಷದ ಮುಖಂಡ ರಾಜ್ ಬಬ್ಬರ್ ಹೇಳಿದ್ದಾರೆ.
ನ.28ರಂದು ನಡೆಯಲಿರುವ ಮಧ್ಯಪ್ರದೇಶ ಚುನಾವಣಾ ಪ್ರಚಾರ ವೇಳೆ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಸ್ಲಿಂ ಸಮಾಜಕ್ಕೂ ಮಂದಿರ ಬೇಕೆಂದು ನಮಗನ್ನಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಚರ್ಚೆ ಮಾಡುವುದಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸುಪ್ರೀಂ ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಆದರೆ, ಬಿಜೆಪಿ ಪ್ರತಿ ಚುನಾವಣೆಯಲ್ಲಿ ರಾಮ ಮಂದಿರ ವಿಷಯನ್ನು ಮುನ್ನೆಲೆಗೆ ತರುತ್ತದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡರೂ ಆಗಿರುವ ರಾಜ್ ಬಬ್ಬರ್ ಹೇಳಿದ್ದಾರೆ.
ಬಿಜೆಪಿ ರಾಮನ ಕುರಿತಾಗಿ ಎಂದಿಗೂ ವಿಶೇಷವಾದ ಭಾವನೆಗಳನ್ನು ಹೊಂದಿಲ್ಲ. ಚುನಾವಣೆ ಬಂದಾಗ ಮಾತ್ರ ರಾಮನ ಹೆಸರಿನಲ್ಲಿ ಮತ ಕೇಳಲು ಆರಂಭಿಸುತ್ತದೆ ಎಂದು ಟೀಕಿಸಿದ್ದಾರೆ.
ರಾಮ ಮಂದಿರ ವಿಷಯದಲ್ಲಿ ಬಿಜೆಪಿ ಮತದಾರರನ್ನು ಮೋಸಗೊಳಿಸುತ್ತಿದೆ ಎಂದು ಜನರು ತಿಳಿದುಕೊಳ್ಳಲು ಪ್ರಾರಂಭಿಸಿದ್ದಾರೆ. ದೇವಾಲಯ ನಿರ್ಮಾಣದ ಭರವಸೆ ನೀಡಿದ್ದಾರಾದರೂ ಈವರೆಗೆ ದಿನಾಂಕವನ್ನು ಹೇಳಿಲ್ಲ ಎಂದು ಅವರು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್ ಎಂದಿಗೂ ವಿರೋಧಿಸಲಿಲ್ಲ ಮತ್ತು ಭವಿಷ್ಯದಲ್ಲಿ ಎಂದಿಗೂ ಹಾಗೆ ಮಾಡುವುದಿಲ್ಲ’ ಎಂದರು.
‘ಎಲ್ಲರೂ ರಾಮ ಮಂದಿರದ ನಿರ್ಮಾಣವನ್ನು ಬಯಸುತ್ತಾರೆ.ಮಂದಿರವನ್ನು ನಿರ್ಮಿಸಬೇಕೆಂದು ಮುಸ್ಲಿಮರು ಬಯಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಆದರೆ, ಸುಪ್ರೀಂಕೋರ್ಟ್ನಲ್ಲಿ ಈ ಪ್ರಕರಣ ಇನ್ನೂ ಬಾಕಿ ಇರುವುದರಿಂದ ಅದು(ನ್ಯಾಯಾಲಯ) ಈ ಸಮಸ್ಯೆಯನ್ನು ನಿರ್ಧರಿಸುತ್ತದೆ’ ಎಂದರು.