ನವದೆಹಲಿ: ‘ಪೂರ್ವಸಿದ್ಧತೆ ಇಲ್ಲದೆಯೇ ಲಾಕ್ಡೌನ್ ಘೋಷಿಸಿದ್ದರಿಂದ ಗೊಂದಲ ಸೃಷ್ಟಿಯಾಗಿ ಲಕ್ಷಾಂತರ ಮಂದಿ ನೋವು ಅನುಭವಿಸುವಂತಾಯಿತು’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಗುರುವಾರ ವಿಡಿಯೊ ಕಾನ್ಫೆರೆನ್ಸ್ ಮೂಲಕ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಕೊರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಲಾಕ್ಡೌನ್ ಘೋಷಿಸಿದ್ದು ಅಗತ್ಯವಾಗಿತ್ತು. ಆದರೆ, ಸರ್ಕಾರ ಸಿದ್ಧತೆಯನ್ನೇ ಕೈಗೊಂಡಿರಲಿಲ್ಲ’ ಎಂದು ಹೇಳಿದ್ದಾರೆ.
‘ಸರ್ಕಾರ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಘೋಷಿಸಿ ಜನರ ಆತಂಕವನ್ನು ದೂರ ಮಾಡಬೇಕು. ರಾಜಕೀಯ ಸಿದ್ಧಾಂತ, ಧರ್ಮ, ಜಾತಿ, ಲಿಂಗವನ್ನು ಮೀರಿ ಎಲ್ಲ ವರ್ಗದವರಲ್ಲಿಯೂ ಕೋವಿಡ್–19 ವ್ಯಾಪಿಸುತ್ತಿದೆ. ಹೀಗಾಗಿ, ಮೊದಲು ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲು ಆದ್ಯತೆ ನೀಡಬೇಕಾಗಿದೆ’ ಎಂದು ಹೇಳಿದ್ದಾರೆ.
ರಾತ್ರೋರಾತ್ರಿ ಲಾಕ್ ಡೌನ್ ಘೋಷಿಸಿದ್ದರಿಂದ ಲಕ್ಷಾಂತರ ಮಂದಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಯೇ ಇಲ್ಲದೆ ಪರದಾಡುವಂತಾಯಿತು ಎಂದಿದ್ದಾರೆ.
The way Lockdown was imposed by govt with few hours of prior information has created problems for common people. Lakhs of migrant workers were forced to return to their villages in the absence of transportation services. This has hurt many people: Congress President Sonia Gandhi pic.twitter.com/76ziC5lycT
‘ವೈದ್ಯರು, ನರ್ಸ್ಗಳು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಬೇಕು. ಲಾಕ್ಡೌನ್ನಿಂದ ರೈತರು, ಜನಸಾಮಾನ್ಯರು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ. ಈ ಬಿಕ್ಕಟ್ಟಿನಿಂದ ಪಾರಾಗಲು ಸರ್ಕಾರ ಸಮಗ್ರವಾದ ನೀತಿಯನ್ನು ರೂಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.