ನವದೆಹಲಿ:71ನೇ ಗಣರಾಜ್ಯೋತ್ಸವದ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಪ್ರತಿಯನ್ನು ಕಳುಹಿಸಿಕೊಟ್ಟಿರುವಕಾಂಗ್ರೆಸ್, ‘ದೇಶವನ್ನು ಒಡೆಯುವುದರ ನಡುವೆ ಬಿಡುವಾದಾಗ ಇದನ್ನು ಓದಿ’ ಎಂದು ವ್ಯಂಗ್ಯವಾಡಿದೆ.
ಬಿಜೆಪಿ ಸರ್ಕಾರ ಸಂವಿಧಾನವನ್ನು ನಾಶಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಹಲವು ಟ್ವೀಟ್ಗಳನ್ನೂ ಮಾಡಿದೆ. ಜತೆಗೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂವಿಧಾನದ ಮುನ್ನುಡಿ ಓದುತ್ತಿರುವ ವಿಡಿಯೊಗಳನ್ನೂ ಟ್ವೀಟ್ ಮಾಡಿದೆ.
‘ಪ್ರಿಯ ಪ್ರಧಾನಿಯವರೇ, ಸಂವಿಧಾನದ ಪ್ರತಿ ಶೀಘ್ರ ನಿಮ್ಮನ್ನು ತಲುಪಲಿದೆ.ದೇಶವನ್ನು ಒಡೆಯುವುದರ ನಡುವೆ ಬಿಡುವಾದಾಗ ಇದನ್ನು ಓದಿ. ಇತಿ, ಕಾಂಗ್ರೆಸ್’ ಎಂದು ಟ್ವೀಟ್ ಮಾಡಿದೆ. ಜತೆಗೆ, ಸಂವಿಧಾನದ ಪ್ರತಿ ಕಳುಹಿಸಿಕೊಟ್ಟಿರುವುದಕ್ಕೆ ಸಂಬಂಧಿಸಿ ಅಮೆಜಾನ್ ನೀಡಿರುವ ರಸೀದಿಯ ಚಿತ್ರವನ್ನೂ ಪೋಸ್ಟ್ ಮಾಡಿದೆ.
ಜಾತಿ, ಪಂಥ, ಲಿಂಗ ಬೇಧವೆಣಿಸದೆ ಎಲ್ಲರೂ ಸಮಾನರು ಎಂದು ಸಂವಿಧಾನದ 14ನೇ ವಿಧಿಯಲ್ಲಿ ಉಲ್ಲೇಖಿಸಿರುವುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ (ಸಿಎಎ) ಸಂವಿಧಾನದ 14ನೇ ವಿಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ’ ಎಂದು ಮತ್ತೊಂದು ಟ್ವೀಟ್ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.