ತಿರುಪತಿ: ಕೋವಿಡ್-19 ಹಿನ್ನೆಲೆಯಲ್ಲಿ ಸುಮಾರು 80 ದಿನಗಳ ಕಾಲ ಮುಚ್ಚಲ್ಪಟ್ಟಿದ್ದ ತಿರುಮಲ ವೆಂಕಟೇಶ್ವರ ದೇವಸ್ಥಾನದ ಬಾಗಿಲುಗಳನ್ನು ತೆರೆಯಲಾಗಿದ್ದು ಸಾಮಾನ್ಯ ಭಕ್ತರ ದರ್ಶನಕ್ಕೆ ಗುರುವಾರ ಅವಕಾಶ ಕಲ್ಪಿಸಲಾಗಿದೆ.
ದರ್ಶನಕ್ಕೆ ತೆರಳಿದ್ದ ಭಕ್ತರು ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಒಳಗೊಂಡಂತೆ ಮುಂತಾದ ಕಟ್ಟುನಿಟ್ಟಿನ ಕ್ರಮಗಳನ್ನು ದೇವಸ್ಥಾನದ ಅಧಿಕಾರಿಗಳು ಕೈಗೊಂಡಿದ್ದಾರೆ.
ಭಕ್ತರನ್ನು ನಿಯಂತ್ರಿಸಲು ಮತ್ತು ಜನದಟ್ಟಣೆ ತಡೆಗಟ್ಟಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಡಿಕೊಂಡಿದೆ.
Andhra Pradesh: Darshan for common devotees resumed at Tirumala Tirupati Balaji Temple today. The trial run was held from June 8-10. Measures such as social distancing and wearing masks, among other measures, is being observed at the temple amid #COVID19 pandemic. pic.twitter.com/GD5Ws8Lm2u
ಜೂನ್ 8 ರಂದು ದೇವಾಲಯವನ್ನು ಪುನಃ ತೆರೆಯಲಾಗಿತ್ತು. ಆದರೆ, ದೇವಾಲಯದ ಅಧಿಕಾರಿಗಳು ಮೊದಲ ಎರಡು ದಿನ ಟಿಟಿಡಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿದ್ದರು. ಮೂರನೇ ದಿನ ಸ್ಥಳೀಯ ಭಕ್ತರಿಗೆ ಮಾತ್ರ ಅನುಮತಿ ನೀಡುವ ಮೂಲಕ ಪ್ರಯೋಗ ನಡೆಸಿದ್ದರು.
ಪ್ರಾಯೋಗಿಕ ಚಾಲನೆಯಲ್ಲಿನ ಲೋಪದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸಿಕೊಂಡ ನಂತರ, ಟಿಟಿಡಿ ಇಂದು ಸಾಮಾನ್ಯ ಭಕ್ತರಿಗೆ ದೇವಾಲಯದ ಬಾಗಿಲು ತೆರೆಯಿತು.
ಪ್ರತಿದಿನ 6,000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.