ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿದವರು ಯಾರೇ ಇದ್ದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಎಪಿ ನಾಯಕರಾರ ಸಂಜಯ್ ಸಿಂಗ್ ಮತ್ತು ಗೋಪಾಲ ರೈ ಗುರುವಾರ ಹೇಳಿದ್ದಾರೆ.
ಇಂಟೆಲಿಜೆನ್ಸ್ ಬ್ಯೂರೋ ನೌಕರ ಅಂಕಿತ್ ಶರ್ಮಾ ಹತ್ಯೆಗೆ ಎಎಪಿ ಕೌನ್ಸಿಲರ್ ತಹೀರ್ ಹುಸೇನ್ ಕಾರಣವೆಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಎಎಪಿ ತನ್ನ ನಿಲುವು ಸ್ಪಷ್ಟಪಡಿಸಿದೆ.
26 ವರ್ಷದ ಅಂಕಿತ್ ಶರ್ಮಾ ಅವರ ಹತ್ಯೆಯ ಹಿಂದೆ ಹುಸೇನ್ ಮತ್ತು ಅವರ ಸಹಚರರ ಕೈವಾಡ ಇದೆ ಎಂದು ಅಂಕಿತ್ ಕುಟುಂಬ ಸದಸ್ಯರು ಆರೋಪಿಸಿದ್ದರು. ಈ ಆರೋಪವನ್ನು ಹುಸೇನ್ ತಳ್ಳಿಹಾಕಿದ್ದರು.
‘ಧರ್ಮ, ಜಾತಿಗಳನ್ನು ಲೆಕ್ಕಿಸದೇ ಪ್ರಾಮಾಣಿಕವಾಗಿ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಅದು ಎಎಪಿಯ ತಹೀರ್ ಹುಸೇನ್ ಆಗಿರಬಹುದು, ಬಿಜೆಪಿಯ ಕಪಿಲ್ ಮಿಶ್ರಾ ಆಗಿರಬಹುದು‘ ಎಂದು ಎಎಪಿ ನಾಯಕ ಗೋಪಾಲ ರೈ ತಿಳಿಸಿದ್ದಾರೆ.