ಬೆಂಗಳೂರು: ಐದು ರಾಜ್ಯಗಳ ಚುನಾವಣೆ ಬಗ್ಗೆ ಹತ್ತಕ್ಕೂ ಹೆಚ್ಚು ಮಾಧ್ಯಮ ಮತ್ತು ಇತರ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ಮಾಡಿ ಕಳೆದ ಶುಕ್ರವಾರ ಫಲಿತಾಂಶ ಪ್ರಕಟಿಸಿದ್ದವು. ನಿಜವಾದ ಫಲಿತಾಂಶ ಬಂದಾಗ ಬಹುತೇಕ ಸಮೀಕ್ಷೆಗಳ ಭವಿಷ್ಯ ತಲೆಕೆಳಗಾಗಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ಗೆ 110ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ ಎಂಬುದೇ ಹೆಚ್ಚಿನ ಸಮೀಕ್ಷೆಯ ಅಂದಾಜು ಆಗಿತ್ತು. ಸಿ–ವೋಟರ್ ಸಮೀಕ್ಷೆ ಕಾಂಗ್ರೆಸ್ಗೆ 136 ಕ್ಷೇತ್ರಗಳಲ್ಲಿ ಗೆಲುವು ಸಾಧ್ಯವಾಗಬಹುದು ಎಂದು ಹೇಳಿತ್ತು. ಆದರೆ, ಸರಳ ಬಹುಮತ ಪಡೆಯಲು ಕಾಂಗ್ರೆಸ್ ತಿಣುಕಾಡಿದೆ.
ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು 126 ಮತ್ತು ಬಿಜೆಪಿ 94 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಎಬಿಸಿ ಸಮೀಕ್ಷೆ ತಿಳಿಸಿತ್ತು. ಸಿ–ವೋಟರ್ ಪ್ರಕಾರ, ಕಾಂಗ್ರೆಸ್ಗೆ 110–126 ಕ್ಷೇತ್ರಗಳು ದೊರೆಯಬೇಕಿತ್ತು. ಟೈಮ್ಸ್ ನೌ ಸಮೀಕ್ಷೆಯಲ್ಲಿ ಬಿಜೆಪಿಗೆ 126 ಕ್ಷೇತ್ರಗಳಲ್ಲಿ ಗೆಲುವು ದೊರೆಯುವ ಭವಿಷ್ಯವಿತ್ತು.
ಮಿಜೋರಾಂನಲ್ಲಿ ಯಾವುದೇ ಪಕ್ಷಕ್ಕೆ ಸರಳ ಬಹುಮತ ಬರುವುದಿಲ್ಲ ಎಂದೇ ಸಮೀಕ್ಷೆಗಳು ಹೇಳಿದ್ದವು. ಕಾಂಗ್ರೆಸ್ ಅಧಿಕಾರ ಕಳೆದುಕೊಂಡರೂ 14–18 ಸ್ಥಾನಗಳು ದೊರೆಯಬಹುದು ಎಂದು ಸಿ–ವೋಟರ್ ಹೇಳಿದ್ದರೆ, ಐಮ್ಸ್ ನೌ 16 ಸ್ಥಾನಗಳನ್ನು ಕೊಟ್ಟಿತ್ತು. ಆದರೆ, ಕಾಂಗ್ರೆಸ್ಗೆ ಅಲ್ಲಿ ಐದು ಸ್ಥಾನಗಳಷ್ಟೇ ಸಿಕ್ಕಿವೆ. ಎಂಎನ್ಎಫ್ ಭರ್ಜರಿ ಜಯ ದಾಖಲಿಸಿದೆ.
ಛತ್ತೀಸಗಡದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಟೈಮ್ಸ್ನೌ ಸಮೀಕ್ಷೆ ತಿಳಿಸಿತ್ತು. ನ್ಯೂಸ್ ನೇಷನ್ ಪ್ರಕಾರ, ಕಾಂಗ್ರೆಸ್ಗೆ 40–44 ಸ್ಥಾನಗಳಲ್ಲಿ ಜಯ ದೊರೆಯಬೇಕಿತ್ತು. ಫಲಿತಾಂಶ ಬಂದಾಗ ಕಾಂಗ್ರೆಸ್ 67 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಹೀಗೆ, ಯಾವ ಸಮೀಕ್ಷೆಯೂ ನಿಜವಾದ ಫಲಿತಾಂಶದ ಹತ್ತಿರಕ್ಕೂ ಸುಳಿದಿಲ್ಲ.
ಆದರೆ, ತೆಲಂಗಾಣದಲ್ಲಿ ಟಿಆರ್ಎಸ್ಗೆ 85 ಕ್ಷೇತ್ರಗಳಲ್ಲಿ ಗೆಲುವು ಸಾಧ್ಯ ಎಂದು ಇಂಡಿಯಾ ಟುಡೆ ಸಮೀಕ್ಷೆ ಹೇಳಿತ್ತು. ಅದೊಂದು ಮಾತ್ರ ನಿಜಕ್ಕೆ ಹತ್ತಿರವಾಗಿದೆ. ಟಿಆರ್ಎಸ್ 88 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.