ಗುರುದಾಸ್ಪುರ(ಪಂಜಾಬ್): ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 22ಕ್ಕೆ ಏರಿಕೆಯಾಗಿದ್ದು, ಮೃತರ ಕುಟುಂಬಕ್ಕೆ ತಲಾ ₹ 2 ಲಕ್ಷ ಪರಿಹಾರ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಘೋಷಿಸಿದ್ದಾರೆ.
ಅಲ್ಲದೆ, ದುರಂತದಲ್ಲಿ ತೀವ್ರ ಗಾಯಗೊಂಡವರಿಗೆ ತಲಾ ₹ 50 ಸಾವಿರ, ಸಣ್ಣ ಪುಟ್ಟ ಗಾಯಗೊಂಡವರಿಗೆ₹25 ಸಾವಿರ, ಸ್ಫೋಟ ಕುರಿತು ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.
ಪಂಜಾಬ್ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ರಾಜೀಂದರ್ ಸಿಂಗ್ ಬಜ್ವಾ ಕೂಡಲೆ ಘಟನೆ ಸ್ಥಳಕ್ಕೆ ತೆರಳಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಬೇಕು. ರಾಜ್ಯ ಪೊಲೀಸರು ಹಾಗೂ ಇತರೆ ಸಿಬ್ಬಂದಿ ಗಾಯಾಳುಗಳು ಉಚಿತ ಚಿಕಿತ್ಸೆ, ಮೃತರ ಕುಟುಂಬಗಳಿಗೆ ಬೇಕಾದ ಎಲ್ಲಾ ಸಹಾಯ ಮಾಡಬೇಕು. ಜಿಲ್ಲಾ ಎಸ್ಪಿ ನೇತೃತ್ವ ವಹಿಸಿ ಅವಶೇಷಗಳನ್ನು ಶೀಘ್ರವೇ ತೆರವುಗೊಳಿಸುವಂತೆಯೇ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ಬುಧವಾರ ಸಂಜೆ 4 ರ ಸಮಯದಲ್ಲಿ ಈ ದುರಂತ ಸಂಭವಿಸಿದ್ದು, ಈ ಕಾರ್ಖಾನೆ ಜನವಸತಿ ಪ್ರದೇಶದಲ್ಲಿ ಇದ್ದ ಕಾರಣ ಇಷ್ಟೆಲ್ಲಾ ಸಾವು ಸಂಭವಿಸಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.